ಇಡೀ ರಜಪೂತ ಜನಾಂಗವನ್ನು ಕಷ್ಟದಿಂದ ಮೇಲೆತ್ತುವಂತೆ ದೇವರೇ ಕನಸಿನಲ್ಲಿ ಹೇಳಿದ್ದಾಳೆಂದು ಇಡೀ ಜನಾಂಗದ ಜನರನ್ನು ಪುಸಲಾಯಿಸಿ ಆತ ವಂಚಿಸಿರುವ ಮೊತ್ತ ಅಂದಾಜು 1,800ಕೋಟಿ ರೂಪಾಯಿ!
ವಂಚನೆಗೆ ಹಲವು ಮುಖ ಎಂಬಂತೆ, ಹಣ ದ್ವಿಗುಣಗೊಳಿಸುವ ಆಮಿಷದಿಂದ ರಾಜ್ಯಾದ್ಯಂತ ಈಗಾಗಲೇ ಲಕ್ಷಾಂತರ ಜನರ ಟೋಪಿ ಹಾಕಿಸಿಕೊಂಡಿದ್ದರು ಕೂಡ ಮೂಢನಂಬಿಕೆ ಮತ್ತು ಮೂರ್ಖ ಜನರು ಇನ್ನೂ ಬುದ್ಧಿ ಕಲಿತಿಲ್ಲ ಎಂಬುದಕ್ಕೆ ಇದು ಮತ್ತೊಂದು ತಾಜಾ ಉದಾಹರಣೆಯಾಗಿದೆ.
ಘಟನೆ ವಿವರ: ಗುಜರಾತ್ ಮೂಲದ ಡಾ.ಅಶೋಕ್ ಜಡೇಜಾನ ಕನಸಿನಲ್ಲಿ ಮಾತಾ ಷಿಕೋರಾ ತಾಯಿ ಕಾಣಿಸಿಕೊಂಡು, ನೀನು ರಜಪೂತ ಜನಾಂಗವನ್ನು ಆರ್ಥಿಕ ಸಂಕಷ್ಟದಿಂದ ಮೇಲಕ್ಕೆತ್ತಬೇಕು, ಅವರಿಂದ 1ಪಟ್ಟು ಹಣ ಪಡೆದು ಮೂರು ಪಟ್ಟು ವಾಪಸು ಕೊಡಬೇಕು ಎಂದು ಸೂಚನೆ ನೀಡಿದ್ದಳಂತೆ.
ಹೀಗೆ ಗದಗದಲ್ಲಿ ವೈದ್ಯ ವೃತ್ತಿ ಮಾಡಿಕೊಂಡಿದ್ದ ಡಾ.ಅಶೋಕ್ ಜಡೇಜಾನ ಕನಸಿನಂತೆ ಗದಗ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ದೇಶದ 11ರಾಜ್ಯಗಳಲ್ಲಿ ವಾಸವಾಗಿರುವ ರಜಪೂತ ಜನಾಂಗದವರಿಂದ ಸುಮಾರು 1,800ಕೋಟಿ ರೂ.ಸಂಗ್ರಹಿಸಿದ್ದ.
ಹೊಟ್ಟೆ-ಬಟ್ಟೆ ಕಟ್ಟಿ ಉಳಿಸಿದ ಹಣವನ್ನು ಒಂದಕ್ಕೆ ಮೂರರಷ್ಟು ಪಡೆಯುವುದರ ಆಸೆಯಿಂದ ಎಲ್ಲರೂ ಜಡೇಜಾನಿಗೆ ನೀಡಿದ್ದರು. ಆದರೆ ಜಡೇಜಾ ಹೇಳದೆ ಕೇಳದೆ ಪರಾರಿಯಾಗಿದ್ದಾನೆ. ಈಗ ಹಣ ಕಳೆದುಕೊಂಡಿರುವ ರಜಪೂತ ಜನಾಂಗದ ಜನ ಲಬೋ, ಲಬೋ ಅಂತ ಬಾಯಿಬಡಿದುಕೊಳ್ಳತೊಡಗಿದ್ದಾರೆ.
ಪ್ರಕರಣ ದಾಖಲು: ಗದಗ, ಹುಬ್ಬಳ್ಳಿ ಸೇರಿದಂತೆ ಕರ್ನಾಟದಲ್ಲಿರುವ ರಜಪೂತರಿಗೆ ಅಂದಾಜು 4ಕೋಟಿ ರೂ.ವಂಚಿಸಿದ್ದಾನೆ ಎನ್ನುವುದು ಗ್ರಾಮಸ್ಥರ ಆರೋಪ. ಆ ಹಿನ್ನೆಲೆಯಲ್ಲಿ ಗದಗ ಬೆಟಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಗುಜರಾತ್ ಪೊಲೀಸ್ ವಶದಲ್ಲಿ ಜಡೇಜಾ: 11ರಾಜ್ಯಗಳಲ್ಲಿ ಇರುವ ರಜಪೂತ ಜನಾಂಗದವರನ್ನು ವಂಚಿಸಿರುವ ಭೂಪ ಅಶೋಕ್ ಜಡೇಜಾ ಗುಜರಾತ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಅಲ್ಲಿ ಕಂಬಿ ಎಣಿಸುತ್ತಿದ್ದಾನೆ. ಆತನಿಂದ ಈಗಾಗಲೇ ಸುಮಾರು 500ಕೋಟಿ ರೂ.ಹಣ ವಶಕ್ಕೆ ತೆಗೆದುಕೊಂಡಿರುವುದಾಗಿ ಮೂಲಗಳು ತಿಳಿಸಿವೆ. |