ಅಸ್ಸಾಂ ಮೂಲದ ಭಯೋತ್ಪಾದನಾ ಸಂಘಟನೆಯ ಮೂವರು ಉಗ್ರರನ್ನು ಅಸ್ಸಾಂ ಪೊಲೀಸರು ನಗರದಲ್ಲಿ ಬಂಧಿಸಿದ್ದು, ಬೆಂಗಳೂರು ಭಯೋತ್ಪಾದಕರ ಅಡಗುತಾಣವಾಗುತ್ತಿದೆ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ.
ದೆಮಾ ಹಾಲೋಮ್ ದಾವೊಗ್(ಡಿಎಚ್ಡಿ) ಸಂಘಟನೆಯ ಮುಖ್ಯ ಕಮಾಂಡರ್ ಜೆವೆಲ್ ಗೊರ್ಲೂಸ್, ಪಾರ್ಥಾ ವಾರಿಸ್ಸ ಮತ್ತು ಸಮೀರ್ ಪಾಠಕ್ ಬಂಧಿತರಾಗಿದ್ದಾರೆ. ಆರೋಪಿಗಳನ್ನು ಬನ್ನೇರು ಘಟ್ಟ ರಸ್ತೆಯ ಅರಕರೆ ಎಂಬಲ್ಲಿ ಬುಧವಾರ ರಾತ್ರಿ ಬಂಧಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಿಲಿಟರಿ ಗುಪ್ತದಳ ಅಧಿಕಾರಿಗಳ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರ ಸಹಾಯದಿಂದ ಅಸ್ಸಾಂ ಪೊಲೀಸರು ಉಗ್ರರನ್ನು ಬಂಧಿಸಿರುವುದಾಗಿ ಹೇಳಿದರು.
ಅರಕೆರೆಯ ಹೊಟೇಲ್ವೊಂದರಲ್ಲಿ ಇದ್ದ ವೇಳೆ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಗರ ಪೊಲೀಸರು ನಿರಾಕರಿಸಿದ್ದಾರೆ. ಆದರೆ ಬಂಧಿತರನ್ನು ಅಸ್ಸಾಂ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಅಸ್ಸಾಂನ ನಾರ್ತ್ ಕ್ಯಾಕೆರ್ ಹಿಲ್ಸ್ ಜಿಲ್ಲೆಯಲ್ಲಿ ಹಿಂಸಾಚಾರ ನಡೆಸಿದ್ದ ಆರೋಪಿಗಳು ನಂತರ ತಲೆಮರೆಸಿಕೊಂಡಿದ್ದರು. ಶ್ರೀಮಂತರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಅಪಹರಿಸಿ ಹಣ ವಸೂಲು ಮಾಡುವುದನ್ನು ದಂಧೆ ಮಾಡಿಕೊಂಡಿದ್ದರು. ಅಸ್ಸಾಂ ಸರ್ಕಾರ ಅವರಿಗೆ ಎಚ್ಚರಿಕೆ ನೀಡಿದ್ದರು ಕೂಡ ಬೆದರಿಕೆಯ ಕೃತ್ಯ ಮುಂದುವರಿಸಿದ್ದರು. |