ಬಿಜೆಪಿ ಹಣ ಹಾಗೂ ಹೆಂಡ ವಿತರಿಸಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂಬ ಹೇಳಿಕೆಯನ್ನು ಬದಲಿಸಿರುವ ಈಶ್ವರಪ್ಪನವರ ವಿರುದ್ಧ ಹರಿಹಾಯ್ದಿರುವ ಕೆಪಿಸಿಸಿ ಅಧ್ಯಕ್ಷ ಆರ್. ವಿ. ದೇಶಪಾಂಡೆ, ಸಚಿವರಾಗಿ ಉಳಿಯುವ ಯೋಗ್ಯತೆ ಹೊಂದಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಬಳಿಕ ಆ ರೀತಿ ಹೇಳಿಕೆ ನೀಡೇ ಇಲ್ಲ ಎನ್ನುವ ಮೂಲಕ ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯುವ ಯೋಗ್ಯತೆ ಇಲ್ಲ ಎಂದು ದೂರಿದ್ದಾರೆ.
ಸಚಿವರ ಹೇಳಿಕೆ ಬಗ್ಗೆ ಮುಖ್ಯಮಂತ್ರಿಗಳು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಗೊಂದಲಕ್ಕೆ ಕಾರಣವಾಗಿದೆ. ಇದರಿಂದ ಸಚಿವರ ಹೇಳಿಕೆ ಸುಳ್ಳೊ ಅಥವಾ ನಿಜವೋ ಎಂಬ ಗೊಂದಲ ನಿರ್ಮಾಣವಾಗಿದ್ದು, ಈ ಬಗ್ಗೆ ತನಿಖೆ ನಡೆಸುವುದೇ ಸೂಕ್ತ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿಗಳು ವಿಜಯ ಸಂಕಲ್ಪ ದಿನಾಚರಣೆ ನಡೆಸಿದ ದಿನದಿಂದಲೇ ಬಿಜೆಪಿ ಸರ್ಕಾರದ ಸಂಕಷ್ಟದ ದಿನಗಳು ಪ್ರಾರಂಭವಾಗಿದೆ ಎಂಬುದಕ್ಕೆ ಇದೇ ನಿಜವಾದ ಸಾಕ್ಷಿ. ವಾಸ್ತವವಾಗಿ ವಿಜಯ ಸಂಕಲ್ಪ ಬಿಜೆಪಿ ಪಾಲಿಗೆ ಕಪ್ಪು ದಿನವಾಗಿದೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಮುಖ್ಯಮಂತ್ರಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ರಾಜ್ಯದ ಅಭಿವೃದ್ಧಿ ಬಗ್ಗೆ ಕೇಂದ್ರ ಸರ್ಕಾರದಿಂದ ನೆರವು ಪಡೆಯುವ ನಿಟ್ಟಿನಲ್ಲಿ ಕೇವಲ ಸಚಿವರ ನಿಯೋಗವನ್ನು ಕಳುಹಿಸುವುದು ಸರಿಯಲ್ಲ. ಇನ್ನು ಮುಂದೆ ಇಂತಹ ವಿಷಯಗಳಿಗೆ ಸರ್ವ ಪಕ್ಷಗಳ ನಿಯೋಗವನ್ನು ಕರೆದೊಯ್ಯಬೇಕು ಎಂದು ಆಗ್ರಹಿಸಿದ್ದಾರೆ. |