ಪಕ್ಷದಲ್ಲಿನ ಹುಳಕಿನ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡರು ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ನಮ್ಮ ಪ್ರಶ್ನಾತೀತ ನಾಯಕರು, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿಕೆ ನೀಡುತ್ತಿರುವ ತನ್ಮಧ್ಯೆಯೇ ಪಕ್ಷದ ಹಿರಿಯ ಮುಖಂಡರೇ ಅಸಮಾಧಾನ ಹೊರಹಾಕುವ ಮೂಲಕ ಭಿನ್ನಮತ ಸ್ಫೋಟಗೊಂಡಿತ್ತು. ಇದರಿಂದಾಗಿ ರಾಜ್ಯ ಬಿಜೆಪಿ ವರಿಷ್ಠರು ಇಕ್ಕಟ್ಟಿಗೆ ಸಿಲುಕುವಂತಾಗಿತ್ತು. ಅದರ ಪರಿಣಾಮವಾಗಿ ಪಕ್ಷದ ಯಾವುದೇ ಶಾಸಕರು ಅಸಮಾಧಾನವನ್ನು ಮಾಧ್ಯಮದ ಮುಂದೆ ಬಾಯ್ಬಿಟ್ಟರೆ ಜಾಗ್ರತೆ ಎಂದು ಕಟು ಎಚ್ಚರಿಕೆಯನ್ನು ನೀಡಿದ್ದಾರೆ. ಯಾವುದೇ ಅಸಮಾಧಾನ ಇದ್ದರೂ ಕೂಡಾ ನಾಲ್ಕು ಗೋಡೆಯ ಮಧ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.ಪಕ್ಷದಲ್ಲಿನ ಬೆಳವಣಿಗೆ ಕುರಿತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೂಡ ಮುಖ್ಯಮಂತ್ರಿಗಳಿಗೆ ಸ್ಪಷ್ಟ ಸಂದೇಶವೊಂದನ್ನು ರವಾನಿಸಿ, ಬ್ಲಾಕ್ ಮೇಲ್ ತಂತ್ರ ಉಪಯೋಗಿಸುವವರನ್ನು ಗಣನೆಗೆ ತೆಗೆದುಕೊಳ್ಳದೆ ಮುಂದುವರಿವಂತೆ ತಿಳಿಸಿದೆ. ಈ ಹೇಳಿಕೆಯ ಬೆನ್ನಲ್ಲೇ ರಾಜ್ಯಾಧ್ಯಕ್ಷರು ಶಾಸಕರಿಗೆ ಎಚ್ಚರಿಕೆ ಗಂಟೆಯನ್ನು ನೀಡಿದ್ದಾರೆ. |