ಮೋರಿ ನೀರಿನಲ್ಲಿ ಕೊಚ್ಚಿಹೋದ ಬಾಲಕ ಅಭಿಷೇಕ್ ಪ್ರಕರಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ವಿರುದ್ಧ ಬಿಬಿಎಂಪಿ ಆಯುಕ್ತ ಸುಬ್ರಹ್ಮಣ್ಯ ಅವರು ಹೂಡಿರುವ ಮಾನನಷ್ಟ ಮೊಕದ್ದಮೆಯನ್ನು ವಾಪಸ್ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.ಬಾಲಕ ಅಭಿಷೇಕ್ ಪ್ರಕರಣದ ಕುರಿತಂತೆ ಖಾಸಗಿ ವಾಹಿನಿಯೊಂದು ನಡೆಸಿದ ಸಂದರ್ಶನದ ವೇಳೆ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರು ಬಿಬಿಎಂಪಿ ಆಯುಕ್ತ ಸುಬ್ರಹಣ್ಯರ ವಿರುದ್ಧ ಹರಿಹಾಯ್ದಿದ್ದರು. ನಂತರ ಆಯುಕ್ತರು ಶನಿವಾರ ನಗರ ನ್ಯಾಯಾಲಯದಲ್ಲಿ ಹೆಗ್ಡೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.ಇದೀಗ ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ವಿರುದ್ಧ ಬಿಬಿಎಂಪಿ ಆಯುಕ್ತರು ಹೂಡಿರುವ ಮೊಕದ್ದಮೆಯನ್ನು ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಡೆಸಿದ ಸಂಧಾನ ಫಲಕಾರಿಯಾಗಿರುವ ಹಿನ್ನೆಲೆಯಲ್ಲಿ ಆಯುಕ್ತ ಸುಬ್ರಹಣ್ಯರು ಈ ನಿರ್ಧಾರ ಕೈಗೊಂಡಿದ್ದಾರೆ.ಲೋಕಾಯುಕ್ತ ನ್ಯಾ.ಹೆಗ್ಡೆಯವರು ತನ್ನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ದೂರಿ ನಗರದ 5ನೇ ಎಸಿಎಂಎಂ ಕೋರ್ಟ್ನಲ್ಲಿ ಬಿಬಿಎಂಪಿ ಆಯುಕ್ತ ಸುಬ್ರಹ್ಮಣ್ಯ ಅವರು ಶನಿವಾರ ಮಾನನಷ್ಟ ದಾವೆ ದಾಖಲಿಸಿದ್ದರು.ಕಳೆದ ಭಾನುವಾರ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಲಿಂಗರಾಜಪುರದ ಬಾಲಕ ಅಭಿಷೇಕ್ ಮೋರಿ ನೀರಿನಲ್ಲಿ ಕೊಚ್ಚಿ ಹೋಗಿದ್ದ, ಈ ಸಂದರ್ಭದಲ್ಲಿ ಬಿಬಿಎಂಪಿ, ಅಗ್ನಿಶಾಮಕ ದಳ ಬಾಲಕನ ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದರೂ ಕೂಡ ಈವರೆಗೂ ಬಾಲಕನ ಮೃತದೇಹ ಪತ್ತೆಯಾಗಿಲ್ಲವಾಗಿತ್ತು. ಮೃತ ಬಾಲಕನ ಕುಟುಂಬಕ್ಕೆ ಭೇಟಿ ನೀಡಿದ ನಂತರ ಲೋಕಾಯುಕ್ತ ಹೆಗ್ಡೆಯವರು ಆಯುಕ್ತರ ವಿರುದ್ಧ ಕಿಡಿಕಾರಿದ್ದರು. |