ಮದ್ರಾಸ್ ಎಂಜಿನಿಯರ್ಸ್ ಗ್ರೂಪ್(ಎಂಇಜಿ) ತಂಡದ ಯೋಧರ ತೀವ್ರ ಶೋಧದ ಬಳಿಕವೂ ಬಾಲಕ ಅಭಿಷೇಕ್ ಮೃತದೇಹ ಪತ್ತೆಯಾಗದಿರುವುದು ತೀವ್ರ ನಿರಾಸೆ ಮೂಡಿಸಿದೆ. ಆ ಮೂಲಕ ಬಾಲಕನ ಮೃತದೇಹ ನಿಗೂಢವಾಗಿಯೇ ಉಳಿದಿದೆ.
ಈ ನಡುವೆ ಸೈನಿಕರು ತಮ್ಮ ಕಾರ್ಯಾಚರಣೆಯನ್ನು ಶುಕ್ರವಾರ ಪೂರ್ಣಗೊಳಿಸಿದ್ದು, ಸುಮಾರು ಎರಡು ಕಿ.ಮೀ.ಉದ್ದದ ಕಾಲುವೆಯ ಕಳೆಯನ್ನು ಸಂಪೂರ್ಣ ಸ್ವಚ್ಚಗೊಳಿಸಿದ್ದಾರೆ. ಮಧ್ನಾಹ್ನ ವೇಳೆಗೆ ಸೈನಿಕರು ಕಾರ್ಯಾಚರಣೆ ಕೊನೆಗೊಳಿಸಿದರು. ಕೆಲ ಹೊತ್ತಿನಲ್ಲೇ ತಮ್ಮ ಸಲಕರಣೆ ಹಾಗೂ ಇತರೆ ವಸ್ತುಗಳೊಂದಿಗೆ ಬಿಡಾರವನ್ನು ತೆರವುಗೊಳಿಸಿದರು.
ಲಿಂಗರಾಜಪುರ ಮೋರಿಯಲ್ಲಿ ಕೊಚ್ಚಿ ಹೋದ ಬಾಲಕ ಅಭಿಷೇಕ್ ಪತ್ತೆಗೆ ಪಾಲಿಕೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ತೀವ್ರ ಹುಡುಕಾಟ ನಡೆಸಿದರು. ಕೊನೆಗೆ ಎಂಇಜಿ ಯೋಧರು ಕಾರ್ಯಾಚರಣೆ ನಡೆಸಿದರೂ ಫಲಪ್ರದವಾಗಲಿಲ್ಲ ಎಂದು ಪಾಲಿಕೆ ಪೂರ್ವ ವಲಯದ ಹೆಚ್ಚುವರಿ ಆಯುಕ್ತ ಎಸ್.ಪುಟ್ಟಸ್ವಾಮಿ ತಿಳಿಸಿದ್ದಾರೆ.
ನಾಲ್ಕು ದಿನಗಳ ಸತತ ಕಾರ್ಯಾಚರಣೆ ಬಳಿಕ ಎಂಇಜಿ ಯೋಧರು ತೆರವು ಕಾರ್ಯ ಸ್ಥಗಿತಗೊಳಿಸಿದರು ಹೆಣ್ಣೂರು ಬಳಿಯ ಎರಡು ಕಿ.ಮೀ.ಉದ್ದದ ರಾಜ ಕಾಲುವೆಯ ಹೂಳು ತೆಗೆಯಲಾಗಿದೆ. ಇದರೊಂದಿಗೆ ಪಾಲಿಕೆಯ ಕಾರ್ಯಾಚರಣೆ ಕೂಡ ಅಂತ್ಯವಾಗಿದೆ ಎಂದರು. |