ಜೆಡಿಎಸ್ ಮತ್ತು ತಮ್ಮ ನಡುವಿನ ಭಿನಾಭಿಪ್ರಾಯ ಸೈದ್ದಾಂತಿಕವಾದುದು. ಆದರೆ, ಅಧಿಕಾರದಲ್ಲಿರುವ ಸರ್ಕಾರದ ದುರಾಡಳಿತವನ್ನು ಬಹಿರಂಗ ಪಡಿಸುವಾಗ ಜೆಡಿಎಸ್ ಪಕ್ಷದ ಸಹಕಾರ ಪಡೆಯುವುದಾಗಿ ವಿಪಕ್ಷ ನಾಯಕ ಸ್ಥಾನಕ್ಕೆ ನೂತನವಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸದನದಲ್ಲಿ ಅಗತ್ಯವಾದಾಗ ಜೆಡಿಎಸ್ ಸಹಕಾರ ಪಡೆಯುತ್ತೇನೆ. ಸರ್ಕಾರದ ತಪ್ಪುಗಳನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಜನರಿಗೆ ತಿಳಿಸುವ ಕೆಲಸ ಮಾಡುತ್ತೇನೆ. ಇದಕ್ಕಾಗಿ ಜೆಡಿಎಸ್ ಸಹಕಾರ ಪಡೆಯುತ್ತೇನೆ" ಎಂದರು.
ವಿರೋಧ ಪಕ್ಷ ನಾಯಕನ ಸ್ಥಾನವನ್ನು ಜವಾಬ್ದಾರಿಯುತವಾಗಿ ನಿಭಾಯಿಸುತ್ತೇನೆ. ಅಧಿಕಾರದ ಜೊತೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಜಾತಿರಾಜಕಾರಣದ ವಿರುದ್ಧ ಸದನದಲ್ಲಿ ಹೋರಾಟ ನಡೆಸುತ್ತೇನೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಅಷ್ಟರೊಳಗೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಆರಂಭವಾಗಿದೆ. ಸದ್ಯಕ್ಕೆ ಭಿನ್ನಮತ ಶಮನವಾದಂತೆ ಕಂಡರೂ ಅದು ತಾತ್ಕಾಲಿಕವಷ್ಟೆ ಎಂದರು. |