ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಲೋಡ್ ಶೆಡ್ಡಿಂಗ್ ಅನ್ನು ಅಧಿಕೃತವಾಗಿ ತಡೆಹಿಡಿಯಲು ಸರ್ಕಾರ ನಿರ್ಧರಿಸಿದೆ.ಮಳೆಯಿಂದ ಲಿಂಗನಮಕ್ಕಿ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ಸ್ ನೀರು ಬಂದಿದೆ. ಇದರಿಂದ ನೀರಿನ ಅಭಾವದ ಆತಂಕ ಕರಗಿದ್ದು, ವಿದ್ಯುತ್ ಕಡಿತದ ಪರಿಣಾಮದಿಂದ ಸಧ್ಯಕ್ಕೆ ರಾಜ್ಯ ಪಾರಾಗಿದೆ ಎಂದು ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರು ಥರ್ಮಲ್ ಘಟಕಗಳನ್ನೇ ನೆಚ್ಚಿಕೊಂಡು ವಿದ್ಯುತ್ ಪೂರೈಸಲಾಗುತ್ತಿದೆ. 7 ಘಟಕಗಳಿಗೆ ತಿಂಗಳಿಗೆ ಆಗುವಷ್ಟು ಕಲ್ಲಿದ್ದಲು ಸಂಗ್ರಹಿಸಿಡಲಾಗಿದೆ. ಪ್ರತಿದಿನ 90 ಮಿಲಿಯನ್ ಯೂನಿಟ್ ಬೇಡಿಕೆ ಇದ್ದು ಅಷ್ಟೇ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ ತದಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರದ ಬಗ್ಗೆ ಒಮ್ಮತ ಮೂಡಿಸುವ ನಿಟ್ಟಿನಲ್ಲಿ ಇದೇ ತಿಂಗಳ 10ರಂದು ನಗರದಲ್ಲಿ ಜನಪ್ರತಿನಿಧಿಗಳು, ಪರಿಸರಾಸಕ್ತ ಸೇರಿದಂತೆ ತಜ್ಞರ ಸಭೆ ಕರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. |