ಬ್ಯಾಂಕ್ಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಸಮಾಜ ಕಲ್ಯಾಣ ಸಚಿವ ಡಿ. ಸುಧಾಕರ್ ಅವರು ರಾಜೀನಾಮೆ ನೀಡಲು ಒಂದು ವಾರ ಗಡುವು ಕೇಳಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಸೋಮವಾರ ವಿ.ಸೋಮಣ್ಣ ಅವರ ರಾಜೀನಾಮೆ ಪಡೆದ ನಂತರ ಸಚಿವ ಸುಧಾಕರ್ ಅವರು ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಸೂಚಿಸಿದ್ದರು. ರಾಜೀನಾಮೆ ನೀಡಬೇಕೆಂದು ಸೂಚಿಸಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸುಧಾಕರ್ ತಮ್ಮನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕಾನೂನಿನ ವಿಷಯವಾಗಿ ಅವರು ಪ್ರಸ್ತಾಪಿಸಿದ ವಿಷಯಗಳು ಸಮರ್ಪಕವಾಗಿದ್ದು, ಒಂದು ವಾರದ ನಂತರವೇ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುಧಾಕರ್ ಮೇಲಿನ ಆರೋಪಗಳಲ್ಲಿ ಕಾನೂನಿನ ತೊಡಕುಗಳಿವೆ. ಈ ವಿಷಯವಾಗಿ ಅವರು ತಮಗೆ ಮನವರಿಕೆ ಮಾಡಿಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ವಾರದ ಗಡುವು ನೀಡಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಬಿಬಿಎಂಪಿ ಚುನಾವಣೆಯೇ ನಮ್ಮ ಮುಂದಿನ ಗುರಿಯಾಗಿದೆ ಎಂದು ತಿಳಿಸಿದ ಅವರು, ಸಂಪುಟ ವಿಸ್ತರಣೆ ಅಥವಾ ಖಾತೆ ಹಂಚಿಕೆ ಕುರಿತಂತೆ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದರು. ಈ ಹಿನ್ನೆಲೆಯಲ್ಲಿ ಇಂದು ವಿದೇಶಕ್ಕೆ ತೆರಳಿರುವ ಮುಖ್ಯಮಂತ್ರಿಗಳು ಈ ತಿಂಗಳ 7ರಂದು ಹಿಂತಿರುಗಲಿದ್ದಾರೆ ಆ ಬಳಿಕವೇ ಸುಧಾಕರ್ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.