29 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಸೇರಿದಂತೆ ರಾಜ್ಯದಲ್ಲಿ ಇನ್ನೂ ಇಬ್ಬರು ಎಚ್1ಎನ್1 ಸೋಂಕಿನಿಂದ ಸಾವನ್ನಪ್ಪಿದ್ದು, ಇದರೊಂದಿಗೆ ರಾಜ್ಯದಲ್ಲಿ ಮೃತರಾದವರ ಸಂಖ್ಯೆ 29ಕ್ಕೇರಿದೆ.
ಬೆಂಗಳೂರಿನ ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರೊಬ್ಬರು ಆ.28ರಂದು ನೆಗಡಿ, ಜ್ವರ, ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಲೇಕ್ಸೈಡ್ ಆಸ್ಪತ್ರೆಗೆ ದಾಖಲಾಗಿದ್ದರು.
ಈ ತೊಂದರೆ ಅವರಿಗೆ ಒಂದು ವಾರದಿಂದ ಇತ್ತು. ಎಚ್1ಎನ್1 ಶಂಕೆಯಿಂದ ಅವರಿಗೆ ಟಾಮಿಫ್ಲೂ ಮಾತ್ರ ನೀಡಲಾಗಿತ್ತು. ಆ.29ರಂದು ಅವರು ಮೃತಪಟ್ಟರು. ಗಂಟಲು ಕೋಶ ಪರೀಕ್ಷೆ ವರದಿ ಮಂಗಳವಾರ ಬಂದಿದ್ದು ಅವರು ಎಚ್1ಎನ್1ನಿಂದ ಸಾವನ್ನಪ್ಪಿರುವುದು ದೃಢವಾಗಿದೆ ಎಂದು ಲೇಕ್ಸೈಡ್ ಆಸ್ಪತ್ರೆಯ ನಿರ್ದೇಶಕ ಡಾ.ಪರಮೇಶ್ ತಿಳಿಸಿದ್ದಾರೆ.
ಏತನ್ಮಧ್ಯೆ 38ವರ್ಷದ ಪುರುಷರೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಎಚ್1ಎನ್1 ಲಕ್ಷಣಗಳಿಂದ ಅವರು ಆ.28ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆ.31ರಂದು ಸಾವನ್ನಪ್ಪಿದ್ದರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.