ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಂತ್ರಿಮಂಡಲ ಪುನಾರಚನೆ ಆಗುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮುಗಿಯುವವರೆಗೂ ಖಾತೆ ಬದಲಾವಣೆ ಹಾಗೂ ಸಂಪುಟ ವಿಸ್ತರಣೆ ಇಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದರೂ. ಮಂತ್ರಿಮಂಡಲ ಪುನಾರಚನೆ ಸಾಧ್ಯತೆ ಹೆಚ್ಚಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಸಂಪುಟ ಪುನಾರಚಿಸುವಂತೆ ಮುಖ್ಯಮಂತ್ರಿಯವರಿಗೆ ಸಲಹೆ ಮಾಡಿದೆ. ತಮ್ಮ ಪರಿವಾರದ ಇಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಆರ್ಎಸ್ಎಸ್ ವರಿಷ್ಠರು ಹೇಳಿದ್ದಾರೆ. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಆರ್ಎಸ್ಎಸ್ ಚಿಂತನ್ ಬೈಠಕ್ನಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ. ಸಂಪುಟ ವಿಸ್ತರಣೆ ಮಾಡುವಾಗ ಪರಿವಾರದವರಿಗೆ ಮಾತ್ರ ಅವಕಾಶ ನೀಡಬೇಕೆಂದು ತಾಕೀತು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ಸೋಲಿನ ನೈತಿಕ ಹೊಣೆ ಹೊತ್ತ ವಸತಿ ಹಾಗೂ ಮುಜರಾಯಿ ಖಾತೆ ಸಚಿವ ಸ್ಥಾನಕ್ಕೆ ಸೋಮಣ್ಣ ರಾಜೀನಾಮೆ ನೀಡಿದ್ದಾರೆ. ಸಮಾಜ ಕಲ್ಯಾಣ ಖಾತೆ ಸಚಿವ ಡಿ.ಸುಧಾಕರ್ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಈಗಾಗಲೇ ಸೋಮಣ್ಣ ಸ್ಥಾನ ತೆರವಾಗಿದ್ದು, ಸುಧಾಕರ್ ಸ್ಥಾನ ತೆರವುಗೊಳ್ಳುವ ಸನಿಹದಲ್ಲಿದೆ.