ಕನ್ನಡದ್ದೇ ಆದ ದೂರದರ್ಶನ ಪ್ರಾರಂಭವಾಗಿ, ಕಾಲಾನಂತರದಲ್ಲಿ 'ಚಂದನ'ದ ಕಂಪೂ ಸೇರಿಕೊಂಡು, ಪ್ರಸ್ತುತ ಸುವರ್ಣ ಮಹೋತ್ಸವ ಸಂಭ್ರಮವನ್ನು ಆಚರಿಸುವ ಸಂದರ್ಭದಲ್ಲಿ ಕನ್ನಡವು ದೂರದರ್ಶನದ ಕಾರ್ಯಕ್ರಮದಲ್ಲಿ ಮಾಯವಾಗಿರುವ ಬಗ್ಗೆ ಅಸಮಾಧಾನವು ವ್ಯಕ್ತವಾಗಿದೆ.
ಕನ್ನಡದ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾ ರಾಜ್ಯದ ಜನತೆಗೆ ಮಾಹಿತಿಯ ಜೊತೆಗೆ ಮನರಂಜನೆಯನ್ನೂ ನೀಡುತ್ತಾ ಬಂದಿರುವ ಬೆಂಗಳೂರು ದೂರದರ್ಶನಕ್ಕೆ ಇಂದು ಸುವರ್ಣ ಮಹೋತ್ಸವದ ಸಂಭ್ರಮ. ಈ ನಿಟ್ಟಿನಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ. ವಿಪರ್ಯಾಸವೆಂದರೆ, ಅದರ ಆಹ್ವಾನ ಪತ್ರಿಕೆಯಲ್ಲಿ 'ಸುವರ್ಣ ಮಹೋತ್ಸವ' ಎಂಬೆರಡು ಪದಗಳನ್ನು ಬಿಟ್ಟರೆ ಮಿಕ್ಕೆಲ್ಲಾ ವಿವರಗಳೂ ಇಂಗ್ಲಿಷ್ಮಯ!
ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲಿರುವ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರುರವರು ಈ ಕುರಿತು ಅತೀವ ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಆಹ್ವಾನ ಪತ್ರಿಕೆಯ ಜೊತೆಯಲ್ಲಿ ಲಗತ್ತಿಸಲಾದ ಪತ್ರವೂ ಸಹ ಕನ್ನಡದಲ್ಲಿಲ್ಲ. ಇದು ಒಕ್ಕೂಟ ವ್ಯವಸ್ಥೆಯ ನಿಲುವುಗಳಿಗೆ ವಿರುದ್ಧವಾದುದು ಎಂದು ಅಭಿಪ್ರಾಯಪಟ್ಟಿರುವ ಚಂದ್ರು, ಈ ಕುರಿತು ಸ್ಪಷ್ಟನೆ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ದೂರದರ್ಶನ ಕೇಂದ್ರವನ್ನು ಕೋರಲಾಗಿದೆ ಎಂದು ತಿಳಿಸಿದ್ದಾರೆ.