ಕರ್ನಾಟಕಕ್ಕೆ ವಿಪತ್ತು ಪರಿಹಾರದಲ್ಲಿ ತಾರತಮ್ಯ ಎಸಗಲಾಗಿದೆ, ನೆರೆಯಿಂದಾದ ಹಾನಿ ಬಗ್ಗೆ ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ, ಪ್ರಧಾನಮಂತ್ರಿಯವರ ಕರ್ನಾಟಕ ವೈಮಾನಿಕ ಸಮೀಕ್ಷೆಯನ್ನು ಮಗದೊಮ್ಮೆ ಮುಂದೂಡಲಾಗಿದ್ದು, ಆಂಧ್ರಪ್ರದೇಶಕ್ಕೆ ಇಂದು ಭೇಟಿ ನೀಡಲಿರುವ ಪ್ರಧಾನಿ, ಶನಿವಾರ ಕರ್ನಾಟಕದಲ್ಲಿ ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ.
ಈ ಮೊದಲು, ಬುಧವಾರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸಮೀಕ್ಷೆ ನಡೆಸಲಿದ್ದಾರೆ ಎಂದು ನಿಗದಿಯಾಗಿತ್ತು, ಅವರು ಹರ್ಯಾಣದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ನಿರತರಾಗಿದ್ದು, ಕರ್ನಾಟಕ ನೆರೆ ಸಮೀಕ್ಷೆಯನ್ನು ಶುಕ್ರವಾರಕ್ಕೆ ಮುಂದೂಡಲ್ಪಟ್ಟಿತ್ತು. ಇದೀಗ ಶುಕ್ರವಾರ ಮಧ್ಯಾಹ್ನ ಸಿಂಗ್ ಅವರು ಆಂಧ್ರಪ್ರದೇಶಕ್ಕೆ ಧಾವಿಸಿ ಅಲ್ಲಿ ಆಗಿರುವ ಹಾನಿಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಅವರ ಜೊತೆಗೆ ಆಂಧ್ರ ಮುಖ್ಯಮಂತ್ರಿ ಕೆ.ರೋಸಯ್ಯ ಕೂಡ ಇರುತ್ತಾರೆ.
ವೈಮಾನಿಕ ಸಮೀಕ್ಷೆ ಬಳಿಕ ಅವರು ಹೈದರಾಬಾದ್ಗೆ ಮರಳಿ, ಅಲ್ಲಿ ಪ್ರವಾಹ ಹಾನಿ ಪರಾಮರ್ಶೆ ಸಭೆಯಲ್ಲಿ ಭಾಗವಹಿಸಲಿದ್ದು, ಮುಖ್ಯಮಂತ್ರಿ ಮತ್ತು ರಾಜ್ಯದ ಸಚಿವರು, ಅಧಿಕಾರಿಗಳು ಉಪಸ್ಥಿತರಿರುತ್ತಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರವಾಹದಲ್ಲಿ ಅತೀ ಹೆಚ್ಚು ಹಾನಿ ಅನುಭವಿಸಿದ ಕರ್ನಾಟಕಕ್ಕೆ ಪ್ರಧಾನಿ ಅವರು ಶನಿವಾರ ಬೆಳಿಗ್ಗೆ ಭೇಟಿ ನೀಡಿ, ವೈಮಾನಿಕ ಸಮೀಕ್ಷೆ ನಡೆಸುವ ಕಾರ್ಯಕ್ರಮವಿದೆ. ಬಳಿಕ ಸಂತ್ರಸ್ತರಿಗೆ ಪರಿಹಾರ ಘೋಷಿಸುವ ಆಶಾವಾದ ಇರಿಸಿಕೊಳ್ಳಲಾಗಿದೆ. ಅಲ್ಲಿಂದ ನಂತರ ಅವರು ದೆಹಲಿಗೆ ಹಿಂತಿರುಗಲಿದ್ದಾರೆ.