ಹೈದರಾಬಾದ್ ಕರ್ನಾಟಕ ಪ್ರವಾಹ ಪೀಡಿತ ಕುಟುಂಬಗಳಿಗೆ ಪರಿಹಾರ ವಿತರಣೆ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ ಎಂಬುದಾಗಿ ಪ್ರಾದೇಶಿಕ ಆಯುಕ್ತ ರಜನೀಶ್ ಗೋಯಲ್ ತಿಳಿಸಿದ್ದಾರೆ. ನಿರ್ಗತಿಕರಾಗಿರುವ 96 ಕುಟುಂಬಗಳಲ್ಲಿ 75 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ ಮತ್ತು ಬಳ್ಳಾರಿಯನ್ನು ಒಳಗೊಂಡಿರುವ ಹೈದರಬಾದ್ ಕರ್ನಾಟಕ ಪ್ರದೇಶದಲ್ಲಿ ಪ್ರವಾಹದಿಂದಾಗಿ 96 ಮಂದಿ ಸಾವನ್ನಪ್ಪಿರುವುದಾಗಿ ಅವರು ತಿಳಿಸಿದ್ದು, ಇವರಲ್ಲಿ 75 ಮಂದಿಯ ಸಂಬಂಧಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗಿತ್ತು, ಮಿಕ್ಕವರಿಗೆ ಒಂದೆರಡು ದಿನಗಳಲ್ಲೇ ಪರಿಹಾರ ನೀಡಲಾಗುವುದು ಎಂಬುದಾಗಿ ಗೋಯಲ್ ಹೇಳಿದ್ದಾರೆ.
ಪ್ರವಾಹದಿಂದಾಗಿ ಜಾನುವಾರು ಕಳೆದುಕೊಂಡಿರುವ ಮಂದಿಗೆ 2.85 ಕೋಟಿ ರೂಪಾಯಿ ವಿತರಿಸಲು ನಿರ್ಧರಿಸಲಾಗಿದೆ. ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದು, ಸದ್ಯವೇ ಪರಿಹಾರ ವಿತರಣೆ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಏತನ್ಮಧ್ಯೆ, ಜೋಗುರ್ ಗುಲ್ಬರ್ಗಾ ತಾಲೂಕಿನಲ್ಲಿ ಸಾಂಕ್ರಾಮಿಕ ರೋಗಗಳು ಹಬ್ಬಿಕೊಳ್ಳುತ್ತಿದ್ದು, 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇವೇಳೆ, ಶೋರಾಪುರದ ಕಕ್ಕೇರಿ ಗ್ರಾಮದಲ್ಲಿ ಏಳು ಮಂದಿ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ವೈದ್ಯಕೀಯ ಶಿಬಿರಗಳನ್ನು ತೆರೆಯಲಾಗಿದೆ.
ಸೋಂಕು ರೋಗಗಳು ಹಬ್ಬದಂತೆ ತಡೆಯಲು ತಡೆಯಲು ಹಲವು ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ.