ಪಾದಯಾತ್ರೆಯಲ್ಲಿ ಮುಖ್ಯಮಂತ್ರಿ ಪಕ್ಷಪಾತ: ಕಾಂಗ್ರೆಸ್ ಕಿಡಿ
ಬೆಂಗಳೂರು, ಶುಕ್ರವಾರ, 9 ಅಕ್ಟೋಬರ್ 2009( 16:33 IST )
ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸಲು ನಿಧಿ ಸಂಗ್ರಹಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಾದಯಾತ್ರೆ ನಡೆಸುತ್ತಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂಬುದಾಗಿ ಕಾಂಗ್ರೆಸ್ ಪಕ್ಷ ದೂರಿದೆ. ನಿಧಿ ಸಂಗ್ರಹದಲ್ಲೂ ರಾಜಕೀಯ ಬೆರೆಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಕಿಡಿ ಕಾರಿದ್ದಾರೆ.
ರಾಯಚೂರಿನ ನೆರೆಸಂತ್ರಸ್ತರಿಗೆ ಮೂರು ಲೋಡ್ ಕಂಬಳಿಗಳನ್ನು ಕೆಪಿಸಿಸಿ ಕಚೇರಿಯಿಂದ ಕಳುಹಿಸುವುದಕ್ಕೆ ಮುಂಚಿತವಾಗಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್ ಹಾಗೂ ವಿ.ಎಸ್. ಉಗ್ರಪ್ಪ ಅವರುಗಳು ಮುಖ್ಯಮಂತ್ರಿಗಳ ಪಾದಯಾತ್ರೆಯನ್ನು ಕಟುವಾಗಿ ಟೀಕಿಸಿದರು.
ಮುಖ್ಯಮಂತ್ರಿಗಳು ನಿಧಿ ಸಂಗ್ರಹ ಮಾಡುತ್ತಿರುವುದಕ್ಕೆ ಆಕ್ಷೇಪವಿಲ್ಲ. ಆದರೆ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ರಾಜಕೀಯ ಮೈಲೇಜ್ ಪಡೆಯಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡೆಸಿದರು.
"ಸಂಕಷ್ಟದಲ್ಲಿರೋರ ನೆರವಿಗೆ ಸಹಕರಿಸೋಣ. ಅದಕ್ಕಾಗಿ ಪಾದಯಾತ್ರೆ ನಡೆಸುತ್ತೇನೆ. ನೀವು ನಮ್ಮೊಂದಿಗೆ ಬನ್ನಿ ಎಂಬುದಾಗಿ ಸೌಜನ್ಯಕ್ಕಾದರು ಒಂದು ಮಾತು ಹೇಳಿಲ್ಲ. ಕನಿಷ್ಠ ಪಕ್ಷ ಒಂದು ಫೋನ್ ಸಹಿತ ಮಾಡಿಲ್ಲ, ವಿಪಕ್ಷ ಮುಖಂಡರನ್ನು ಜತೆಯಲ್ಲಿ ಕರೆದೊಯ್ದರೆ ತಮ್ಮ ರಾಜಕೀಯ ಮೈಲೇಜ್ಗೆ ಹೊಡೆತ ಬೀಳುತ್ತದೆ ಎಂಬ ಭಯವೇ ಇದಕ್ಕೆ ಕಾರಣ" ಎಂದು ಅವರು ದೂರಿದ್ದಾರೆ.
ಬಡವರ, ಸಂತ್ರಸ್ತರ ಬವಣೆಯನ್ನು ಕಂಡು ಜನತೆ ಸಹಾಯ ಹಸ್ತನೀಡಿದ್ದಾರೆಯೇ ವಿನಹ ಯಡಿಯೂರಪ್ಪರ ಪ್ರಾಮಾಣಿಕತೆಯನ್ನು ಮೆಚ್ಚಿ ಅಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದರು.
ಲೆಕ್ಕ ನೀಡಲಿ ಸಂತ್ರಸ್ತರಿಗೆ ಪರಿಹಾರಕ್ಕಾಗಿ ಸಂಗ್ರಹವಾದ ಹಣದಲ್ಲಿ ಎಷ್ಟು ಖರ್ಚಾಗಿದೆ ಎಂಬ ನಿಖರ ಮಾಹಿತಿ ನೀಡಬೇಕು ಎಂಬುದಾಗಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಉಗ್ರಪ್ಪ ಒತ್ತಾಯಿಸಿದರು. ಇದಲ್ಲದೆ, ಸಂಗ್ರಹವಾಗಿರುವ ಮೊತ್ತದಲ್ಲಿ ಕೇಂದ್ರದಿಂದ ಪಡೆದ ಮೊತ್ತ ಎಷ್ಟು, ಸಂಗ್ರಹ ಮಾಡಿರುವುದು ಎಷ್ಟು ಹಾಗೂ ಸರ್ಕಾರ ತನ್ನ ಬೊಕ್ಕಸದಿಂದ ಎಷ್ಟು ಹಣ ವಿನಿಯೋಗಿಸಿದೆ ಎಂಬ ಕುರಿತೂ ಮಾಹಿತಿ ನೀಡಬೇಕು ಎಂದು ಅವರು ನುಡಿದರು.