ಪ್ರವಾಹ ಪೀಡಿತ ಸ್ಥಳಗಳ ವೈಮಾನಿಕ ಸಮೀಕ್ಷೆಗಾಗಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಒಂದು ಸಾವಿರ ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಇದನ್ನು ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಣೆ ಮಾಡಿರುವುದಾಗಿ ಹೇಳಿದ್ದಾರೆ. ಅವರು ರಾಯಚೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಆರ್ಥಿಕ ನೆರವು ಮಾತ್ರ ಪರಿಹಾರ ಅಲ್ಲ ಎಂದು ಹೇಳಿದ ಪ್ರಧಾನಿ ನೆರೆ ಪರಿಸ್ಥಿತಿ ಬಗ್ಗೆ ಕೇಂದ್ರ ತಂಡದಿಂದ ಆಧ್ಯಯನ ಮಾಡಲಿದೆ ಎಂದು ನುಡಿದರು. ಅಧ್ಯಯನದ ಬಳಿಕ ಸಮರ್ಪಕ ಪರಿಹಾರ ಘೋಷಿಸಲಾಗುವುದು ಅಲ್ಲದೆ, ಪ್ರವಾಹದಲ್ಲಿ ಮೃತರಾದವರ ಕುಟುಂಬಕ್ಕೆ ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಅವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.
ರಾಜ್ಯದಲ್ಲಿ ಏಕಕಾಲಕ್ಕೆ ಅತಿವೃಷ್ಟಿ, ಅನಾವೃಷ್ಟಿ ಸಂಭವಿಸಿದ್ದು, ಇವೆರಡನ್ನೂ ರಾಜ್ಯವು ಪರಿಗಣಿಸಲಿದೆ. ಇದಕ್ಕಾಗಿ ಆಡಳಿತವನ್ನು ಟೀಕಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
ಪ್ರಧಾನಿಯವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹಸಚಿವ ವಿ.ಎಸ್. ಆಚಾರ್ಯ, ಕಂದಾಯ ಸಚಿವ ಕರುಣಾಕರ ರೆಡ್ಡಿ, ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಉಪಸ್ತಿತರಿದ್ದರು.
ರಾವಣನ ಹೊಟ್ಟೆಗೆ ಗುಟುಕು ಮಜ್ಜಿಗೆ ರಾಜ್ಯದ ಸುಮಾರು 17 ಜಿಲ್ಲೆಗಳು ಪ್ರವಾಹದಿಂದಾಗಿ ಹಾನಿಗೀಡಾಗಿದ್ದು ಸುಮಾರು 16,500 ಕೋಟಿಗಳಷ್ಟು ಹಾನಿಯಾಗಿದೆ ಎಂಬುದಾಗಿ ಮೇಲ್ನೋಟಕ್ಕೆ ಅಂದಾಜಿಸಲಾಗಿದೆ. ಗ್ರಾಮಕ್ಕೆ ಗ್ರಾಮಗಳೇ ಮುಳುಗಿದ್ದವು. ಕೆಲವು ಜಿಲ್ಲೆಗಳಲ್ಲಿ ಸಂಪೂರ್ಣ ಹಾನಿಯಾಗಿದ್ದರೆ, ಮತ್ತೆ ಕೆಲವು ಜಿಲ್ಲೆಗಳಲ್ಲಿ ಭಾಗಶಃ ಹಾನಿಯುಂಟಾಗಿದೆ. ಲಕ್ಷಾಂತರ ಹೆಕ್ಟೇರ್ ಬೆಳೆನಾಶವಾಗಿದೆ. ಸಂತ್ರಸ್ತರು ಮನೆಮಠಗಳನ್ನು ಕಳೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ಜನತೆ ಸ್ವಯಂಆಗಿ ದಾನಮಾಡುತ್ತಿದ್ದು, ಇದೀಗಾಗಲೇ 500 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದೀಗ ಕೇಂದ್ರ ಸರ್ಕಾರ ಕೇವಲ ಸಾವಿರ ಕೋಟಿ ರೂಪಾಯಿ ಪರಿಹಾರ ಘೋಷಿಸಿರುವುದು ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಈ ಮಧ್ಯೆ, ಆಂಧ್ರಪ್ರದೇಶದಲ್ಲಿಯೂ ನೆರೆ ಹಾವಳಿ ತಲೆದೋರಿದ್ದು, ಅಲ್ಲಿಗೂ ಪ್ರಧಾನಿ ಶುಕ್ರವಾರ ಸಾವಿರ ಕೋಟಿ ಪರಿಹಾರ ಘೋಷಿಸಿದ್ದಾರೆ. ಕರ್ನಾಟಕಕ್ಕೆ ಹೋಲಿಸಿದರೆ ಆಂಧ್ರದಲ್ಲಿ ಸಂಭವಿಸಿರುವ ನಷ್ಟದ ಪ್ರಮಾಣ ತುಂಬ ಕಡಿಮೆ.