ಪಾದಯಾತ್ರೆ ವೇಳೆ ತಮ್ಮ ಹಿಂದೆ ನಿಂತು ಪೋಸ್ ಕೊಡುವ ಮಂತ್ರಿಗಳನ್ನು ನೆರೆ ಪೀಡಿತ ಸ್ಥಳಗಳಿಗೆ ಮುಖ್ಯಮಂತ್ರಿಗಳು ಕಡ್ಡಾಯವಾಗಿ ಕಳುಹಿಸಿಕೊಡಬೇಕು ಎಂದು ಜೆಡಿಎಸ್ ಸಹೋದರರಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಒತ್ತಾಯಿಸಿದ್ದಾರೆ.
ಇದೇವೇಳೆ, ನೆರೆ ಪರಿಹಾರ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬುದಾಗಿ ದೇವೇಗೌಡರ ಈ ಪುತ್ರದ್ವಯರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ.
ಮುಖ್ಯಮಂತ್ರಿಗಳ ಹಿಂದೆ ನಿಂತು ಟಿವಿ ಕ್ಯಾಮರಾಗಳಿಗೆ ಪೋಸ್ ನೀಡುವ ಸಚಿವರ ಮುಖಗಳಲ್ಲಿ ಸಂತ್ರಸ್ತರ ಬಗ್ಗೆ ದುಃಖ ಇಲ್ಲವೇ, ನೋವಿನ ಎಳೆಯೂ ಕಾಣುವುದಿಲ್ಲ ಎಂದು ಅವರುಗಳು ಗೇಲಿ ಮಾಡಿದರು. ಈ ಮಂತ್ರಿಗಳನ್ನು ನೆರೆಪೀಡಿತ ಜಿಲ್ಲೆಗಳಿಗೆ ಕಡ್ಡಾಯವಾಗಿ ಕಳುಹಿಸಬೇಕು ಮತ್ತು ಪ್ರತಿಜಿಲ್ಲೆಯ ಪರಿಹಾರ ಕಾರ್ಯದ ಜವಾಬ್ದಾರಿಯನ್ನು ತಲಾ ನಾಲ್ವರು ಮಂತ್ರಿಗಳಿಗೆ ವಹಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಪರಿಹಾರ ಪ್ರವಾಹ ಸಂತ್ರಸ್ತರಿಗೆ 150 ಲೋಡ್ ಅಕ್ಕಿ ಹಾಗೂ ತಲಾ ಒಂದು ಲಕ್ಷ ಷರ್ಟ್, ಬ್ಲಾಂಕೆಟ್, ಪಂಚೆ ಮತ್ತು ಸೀರೆಗಳನ್ನು ಜೆಡಿಎಸ್ ವಿತರಿಸಲಿದೆ ಎಂದು ಅವರು ತಿಳಿಸಿದರು. ದಾನಿಗಳಿಂದ ಸುಮಾರು 50 ಲೋಡ್ ಅಕ್ಕಿ ಸಂಗ್ರಹಿಸಲಿದ್ದು, ಮಿಕ್ಕ 100 ಲೋಡ್ ಅಕ್ಕಿಯನ್ನು ಪಕ್ಷವೇ ಖರೀದಿಸಿ ವಿತರಣೆ ಮಾಡಲಿದೆ ಎಂದು ತಿಳಿಸಿದರು. ಸಂತ್ರಸ್ತ ಜಿಲ್ಲೆಗಳಲ್ಲಿ ಶಾಸಕರು ಹಾಗೂ ಮಾಜಿಶಾಸಕರ ತಲಾ 5ರಿಂದ 10 ಮಂದಿಯ ತಂಡವು, ಈ ಸಾಮಾಗ್ರಿಗಳನ್ನು ಅಕ್ಟೋಬರ್ 12 ಮತ್ತು 13ರಂದು ವಿತರಣೆ ಮಾಡಲಿವೆ ಎಂದೂ ಅವರು ಹೇಳಿದ್ದಾರೆ.