ಬಿಜೆಪಿ ಬಿಕ್ಕಟ್ಟಿನಿಂದ ರೋಸಿ ಹೋಗಿರುವ ಸಂಘ ಪರಿವಾರ ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಮಾಡಕೂಡದು ಎನ್ನುವ ಸ್ಪಷ್ಟ ಸಂದೇಶವನ್ನು ಪಕ್ಷದ ರಾಷ್ಟ್ರೀಯ ನಾಯಕತ್ವಕ್ಕೆ ರವಾನಿಸಿದೆ.
ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಂಘ ಪರಿವಾರದ ಪ್ರಮುಖರು ಬುಧವಾರ ಇಲ್ಲಿನ ಕೇಶವ ಕೃಪಾದಲ್ಲಿ ಸಭೆ ಸೇರಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಮೈಚ ಜಯದೇವ, ಮಂಗೇಶ ಬೆಂಡೆ ಸೇರಿದಂತೆ ಏಳೆಂಟು ಮಂದಿ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಯಡಿಯೂರಪ್ಪ ನೇತೃತ್ವದಲ್ಲೇ ಬಿಜೆಪಿ ಸರ್ಕಾರ ಮುಂದುವರಿಯಬೇಕೆನ್ನುವ ಸಲಹೆಯನ್ನೂ ಪರಿವಾರದ ಪ್ರಮುಖರು ದೆಹಲಿಯಲ್ಲಿನ ಪಕ್ಷ ಮತ್ತು ಪರಿವಾರದ ವರಿಷ್ಠರಿಗೆ ನೀಡಿದ್ದಾರೆ.
ಬಂಡಾಯದ ಬಾವುಟ ಹಾರಿಸಿರುವ ರೆಡ್ಡಿ ಸಹೋದರರ ಬಣ, ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಆಗಲೇಬೇಕು ಎಂದು ಪಕ್ಷದ ಹೈಕಮಾಂಡ್ಗೆ ಆಗ್ರಹಿಸಿದ್ದು, ಈ ನಿಲುವಿನಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಹೈಕಮಾಂಡ್ ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ ಎಂದಿದೆ. ಅದಕ್ಕೆ ಪೂರಕ ಎಂಬಂತೆ ಆರ್ಎಸ್ಎಸ್ ಕೂಡ ನಾಯಕತ್ವ ಬದಲಾವಣೆ ಬೇಡ ಎಂಬ ಸಂದೇಶ ರವಾನಿಸಿದೆ.