ಬಿಜೆಪಿ ತನ್ನ ಸಮಾಧಿ ತಾನೇ ತೋಡಿಕೊಳ್ಳುತ್ತಿದೆ: ಕಾಂಗ್ರೆಸ್
ಗುಲ್ಬರ್ಗ, ಗುರುವಾರ, 5 ನವೆಂಬರ್ 2009( 17:09 IST )
ಆಪರೇಶನ್ ಕಮಲವೆಂಬ ಅನಿಷ್ಟ ರಾಜಕೀಯ ತಂತ್ರಗಾರಿಕೆಯಿಂದ ಜನರ ಮೇಲೆ ಸವಾರಿ ಮಾಡಲು ಹೊರಟ ಬಿಜೆಪಿ ಸ್ವತಃ ತನ್ನ ಕಾಲು ತಾನೇ ಮುರಿದುಕೊಂಡು ಬೀಳುವ ಹಂತಕ್ಕೆ ತಲುಪಿದೆ ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಹಾಗೂ ಕಾಂಗ್ರೆಸ್ ನಾಯಕ ಬಿ.ಆರ್.ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ಜಗಳ ಬೀದಿಗೆ ಬಂದಿದೆ. ಗಂಡ-ಹೆಂಡಿರ ಜಗಳದಲ್ಲಿ ಕೂಸು ನುಗ್ಗು ನುಗ್ಗು ಎನ್ನುವಂತೆ ಜನರ ಸ್ಥಿತಿಯಾಗಿದೆ ಎಂದರು.
ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ನೆರೆಗೆ ತುತ್ತಾಗಿರುವ ಜನರಿಗೆ ಪರಿಹಾರ ಕೊಡುವಲ್ಲಿ ಅಧಿಕಾರ ಶಾಹಿ ಆಟವಾಡುತ್ತಿದೆ. ಕನ್ನಡ ರಾಜ್ಯೋತ್ಸವದಂದು ನಾಡು-ನುಡಿಗೆ ನಮನ ಸಲ್ಲಿಸುವುದನ್ನು ಬಿಟ್ಟು ಜವಾಬ್ದಾರಿಯಲ್ಲಿರುವ ಮಂತ್ರಿ, ಶಾಸಕರುಗಳು ಬೆಂಗಳೂರು, ಹೈದರಾಬಾದ್ ಮತ್ತು ಗೋವಾಗಳಲ್ಲಿ ಬೀಡುಬಿಟ್ಟು ಮೋಜು ಮಾಡುತ್ತ ನಾಡಿಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.