'ಬಿಕ್ಕಟ್ಟು ಶಮನವಾಗುವವರೆಗೆ ಯಾವುದೇ ಕಾರಣಕ್ಕೂ ನಮ್ಮ ಕಾಲೆಳೆದ ಯಜಮಾನನ(ಯಡಿಯೂರಪ್ಪ) ಜತೆ ನೇರ ಮಾತುಕತೆ ನಡೆಸುವುದಿಲ್ಲ' ಎಂದು ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಹೇಳುವ ಮೂಲಕ ತಮ್ಮ ಪಟ್ಟನ್ನು ಬಿಗಿಗೊಳಿಸಿದ್ದಾರೆ.
ಬಂಡಾಯ ಶಮನಕ್ಕಾಗಿ ಗುರುವಾರ ಬಿಜೆಪಿಯ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಅವರೊಂದಿಗೆ ಜನಾರ್ದನ ರೆಡ್ಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಒಳ್ಳೆಯದನ್ನು ಮಾಡಲು ಹೊರಟಾಗಲೂ ಸಹ ಕಾಲೆಳೆಯುವಂತಹ ನೀಚ ಬುದ್ದಿಯನ್ನು ಪ್ರದರ್ಶಿಸುತ್ತಿರುವುದು ಸರಿಯಲ್ಲ ಎಂದು ಮತ್ತೊಮ್ಮೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಈಗಾಗಲೇ ಪಕ್ಷದ ವರಿಷ್ಠರಾದ ಸುಷ್ಮಾ ಸ್ವರಾಜ್ ಅವರೊಂದಿಗೆ ನಾಲ್ಕು ಸುತ್ತಿನ ಮಾತುಕತೆ ನಡೆಸಲಾಗಿದೆ. ಅದೇ ರೀತಿ ಅರುಣ್ ಜೇಟ್ಲಿ, ಅನಂತ್ ಕುಮಾರ್, ವೆಂಕಯ್ಯ ನಾಯ್ಡು ಅವರೊಂದಿಗೆ ಚರ್ಚೆ ನಡೆಸಿ ವಿಷಯದ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದರು.
ಆ ನಿಟ್ಟಿನಲ್ಲಿ ರಾಜ್ಯದ ಜನರ ಹಿತದೃಷ್ಟಿಯಿಂದ ಉತ್ತಮ ನಾಯಕರ ಆಯ್ಕೆಯನ್ನು ಮಾಡುವಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂಬ ವಿಶ್ವಾಸ ತಮಗೆ ಇರುವುದಾಗಿ ರೆಡ್ಡಿ ಈ ಸಂದರ್ಭದಲ್ಲಿ ತಿಳಿಸಿದರು. ಆದರೆ ನಮ್ಮ ಕಾಲೆಳೆಯಲು ಹೊರಟಿರುವ ಯಜಮಾನನ ಜತೆ(ಮುಖ್ಯಮಂತ್ರಿ ಯಡಿಯೂರಪ್ಪ) ಸಂಧಾನದ ಮಾತುಕತೆಯೇ ಇಲ್ಲ ಎಂದು ಪುನರುಚ್ಚರಿಸಿದರು.