ನೆರೆ ಹಾವಳಿ ಪೀಡಿತ ಪ್ರದೇಶದಲ್ಲಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಪ್ರವಾಸ ಮಾಡಲು ಸ್ವತಂತ್ರರು. ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು ಎಂದು ಕಂದಾಯ ಸಚಿವ ಕರುಣಾಕರ ರೆಡ್ಡಿ ತಿಳಿಸಿದ್ದಾರೆ.
ಶೋಭಾ ಕರಂದ್ಲಾಜೆ ಅವರು ನೆರೆ ಪೀಡಿತ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಪರಿಹಾರ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಲು ತಾವು ಯಾರಿಗೂ ಸೂಚಿಸಿಲ್ಲ. ಅಲ್ಲದೇ, ಮಾಜಿ ಸಚಿವೆಯಷ್ಟೇ ಅಲ್ಲ, ಯಾರು ಬೇಕಾದರೂ ಎಲ್ಲಿಗಾದರೂ ಅಡ್ಡಾಡಲು ಸ್ವತಂತ್ರರಾಗಿದ್ದಾರೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ ಎಂದರು.
ಸಂತ್ರಸ್ತರಿಗೆ ಪರಿಹಾರ ತಲುಪುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಮಾಜಿ ಸಚಿವೆ ಸರ್ಕಾರಕ್ಕೆ ವರದಿ ನೀಡುವುದಾಗಿ ಹೇಳಿದ್ದಾರೆ. ಆದರೆ, ಪರಿಶೀಲನೆ ನಡೆಸುವಂತೆ ಹೇಳಿಲ್ಲ. ಪ್ರವಾಸದ ಬಳಿಕ ಅವರು(ಶೋಭಾ) ಏನು ವರದಿ ನೀಡುತ್ತಾರೋ ನೋಡೋಣ ಎಂದು ಪ್ರತಿಕ್ರಿಯಿಸಿದರು.