ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಹಿಳಾ ಸಿಬ್ಬಂದಿಯೊಬ್ಬರನ್ನು ಅನಗತ್ಯವಾಗಿ ವರ್ಗಾವಣೆ ಮಾಡಲು ಕಾರಣರಾದ ಆರೋಪ ಹೊತ್ತ ಶಾಸಕ ಸಿ.ಟಿ.ರವಿ ಮತ್ತು ಸಾರಿಗೆ ಸಚಿವ ಆರ್.ಅಶೋಕ ಅವರನ್ನು ಹೈಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿತು.
ವರ್ಗಾವಣೆ ಕಾರಣ ಕೇಳಲು ಅವರಿಬ್ಬರಿಗೂ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರು ತುರ್ತು ನೋಟಿಸ್ ಜಾರಿಗೆ ಆದೇಶಿಸಿದ್ದಾರೆ. ಅಪರೂಪ ಎನ್ನಬಹುದಾದ ಈ ಪ್ರಕರಣದಲ್ಲಿ, ಅರ್ಜಿಯಲ್ಲಿ ಪ್ರತಿವಾದಿಗಳ ಪಟ್ಟಿಯಲ್ಲಿ ಇವರ ಹೆಸರು ಇಲ್ಲದಿದ್ದರೂ, ನೋಟಿಸ್ ಜಾರಿಗೆ ಆದೇಶಿಸಲಾಗಿದೆ.
ಫ್ಲಾಸಿ ಫಿಲೋಮಿನಾ ಡಿಸೋಜಾ ಅವರು ಸಂಸ್ಥೆಯ ಚಿಕ್ಕಮಗಳೂರು ಶಾಖೆಯಲ್ಲಿ ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರನ್ನು ಅ.14ರಂದು ಕೋಲಾರಕ್ಕೆ ವರ್ಗಾವಣೆ ಮಾಡಲಾಯಿತು. ಸಾರ್ವಜನಿಕ ಹಿತಾಸಕ್ತಿಯಿಂದ ಈ ವರ್ಗಾವಣೆ ಮಾಡಲಾಗಿದೆ ಎಂದು ಕಾರಣ ನೀಡಲಾಗಿತ್ತು.
ಈ ಬಗ್ಗೆ ಸಂದೇಹ ಬಂದುದರಿಂದ ತಮ್ಮ ವರ್ಗಾವಣೆ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದಾಗ, ಸಿ.ಟಿ.ರವಿ ಅವರು ತಮ್ಮನ್ನು ವರ್ಗಾವಣೆ ಮಾಡುವಂತೆ ಸಚಿವ ಅಶೋಕ ಅವರಿಗೆ ಬರೆದಿದ್ದು ತಿಳಿದು ಬಂದಿತ್ತು ಎಂದು ಅರ್ಜಿಯಲ್ಲಿ ಫ್ಲಾಸಿ ತಿಳಿಸಿದ್ದಾರೆ.