ಸಾಕಷ್ಟು ವಿವಾದ ಹುಟ್ಟು ಹಾಕಿದ್ದ ವಿದ್ಯಾರ್ಥಿನಿ ಪ್ರಿಯಾಂಕಳ ವಂಚನೆ ಪ್ರಕರಣವನ್ನು ಆರ್ಎಂಸಿ ಯಾರ್ಡ್ ಠಾಣೆಗೆ ದಿಢೀರ್ ವರ್ಗಾಯಿಸಿ ಆದೇಶ ನೀಡಲಾಗಿದೆ. ಕುತೂಹಲ ಕೆರಳಿಸಿದ್ದ ಪ್ರಕರಣವನ್ನು ವರ್ಗಾವಣೆ ಮಾಡಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಪ್ರಕರಣ ನಮ್ಮ ಠಾಣೆಗೆ ವರ್ಗಾಯಿಸಲಾಗಿದೆ. ಕಡತಗಳು ಇನ್ನೂ ಬಂದಿಲ್ಲ. ಕಡತಗಳು ಬಂದ ನಂತರ ತನಿಖೆ ಆರಂಭಿಸಲಾಗುತ್ತದೆ ಎಂದು ಇನ್ಸ್ಪೆಕ್ಟರ್ ಜಿ.ಸಿ.ಮಂಜುನಾಥ್ ತಿಳಿಸಿದ್ದಾರೆ. ಪ್ರಿಯಾಂಕ ಅವರನ್ನು ಪೊಲೀಸರು ಮತ್ತೆ ಕರೆಯಿಸಿ ಹೇಳಿಕೆ ಪಡೆಯಲಿದ್ದಾರೆ ಮತ್ತು ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಿದರು.
ಕಳೆದ ನಾಲ್ಕೈದು ವರ್ಷಗಳಿಂದ ಪ್ರಿಯಾಂಕ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಆನಂದ್ ಎಂಬ ವ್ಯಕ್ತಿ ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದ. ಈ ಕುರಿತು ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿಸಲಾಗಿತ್ತು.
ನಂದಿನಿಲೇಔಟ್ ಠಾಣೆ ಇನ್ಸ್ಪೆಕ್ಟರ್ ಚಂದ್ರು ಮತ್ತು ಸಿಬ್ಬಂದಿ ಸರಿಯಾದ ಕ್ರಮ ಕೈಗೊಳ್ಳದ ಕಾರಣ ಆನಂದ್ ಇನ್ನೊಂದು ವಿವಾಹವಾಗಲು ಕಾರಣವಾಯಿತು ಎಂದು ಹಲವು ಮಹಿಳಾಪರ ಸಂಘಟನೆಗಳ ಸದಸ್ಯರು ಮತ್ತು ಸಾರ್ವಜನಿಕರು ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.