ದೇಶದಲ್ಲಿ ಮುಸಲ್ಮಾನರ ದೇಶ ಪ್ರೇಮವನ್ನು ಯಾರೂ ಪ್ರಶ್ನೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಮಾಜಿ ಗೃಹ ಸಚಿವ, ಜೆಡಿಎಸ್ ಮುಖಂಡ ಪಿ.ಜಿ.ಆರ್.ಸಿಂಧ್ಯ ತಿಳಿಸಿದ್ದಾರೆ.
ಈ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮುಸಲ್ಮಾನರು, ಅಲ್ಪಸಂಖ್ಯಾತರು ಸಮಾನವಾಗಿ ಬಾಳುವ ಹಕ್ಕು ಎಲ್ಲರಿಗೂ ಇದೆ ಎಂದು ಹೇಳಿದರು.
ಅವರು ವಿಧಾನಪರಿಷತ್ ಚುನಾವಣೆ ಪ್ರಯುಕ್ತ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರ ಸಭೆಯನ್ನು ಕನಕಪುರದ ಅರ್ಕಾವತಿ ಸೇತುವೆ ಬಳಿ ಇರುವ ಶ್ರೀ ಮಾಸ್ತಮ್ಮ ಕಲ್ಯಾಣ ಮಂಟಪದಲ್ಲಿ ಉದ್ಘಾಟಿಸಿ ಮಾತನಾಡಿದರು. ದುಡಿಯುವ ಎಲ್ಲ ಜನರಿಗೆ ಬದುಕುವ ಹಕ್ಕು ಇದೆ.
ಮುಸಲ್ಮಾನರನ್ನು ಸಂಶಯ ದೃಷ್ಟಿಯಿಂದ ನೋಡುವ ಕೋಮುವಾದಿ ಬಿಜೆಪಿ ಸರ್ಕಾರದ ದೌರ್ಜನ್ಯದ ಅಡಳಿತವನ್ನು ಮಟ್ಟ ಹಾಕುವ ಉದ್ದೇಶದಿಂದ ನಾವು ಚುನಾವಣಾ ಒಪ್ಪಂದವನ್ನು ಕಾಂಗ್ರೆಸ್ ಪಕ್ಷದ ಜೊತೆಗೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷವನ್ನು ತಮ್ಮ ಅಸ್ತಿತ್ವವನ್ನು ಹಾಳು ಮಾಡಿಕೊಂಡು, ಕಾಂಗ್ರೆಸ್ ಪಕ್ಷಕ್ಕೆ ಶರಣಾಗಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿರುವುದಾಗಿ ಸ್ಪಷ್ಟನೆ ನೀಡಿದರು. ಇದೊಂದು ತಾತ್ಕಾಲಿಕ ಒಪ್ಪಂದ ಎಂದರು.