ಬಿಜೆಪಿಯು ರಾಜ್ಯದಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪಗಳನ್ನು ತೀವ್ರವಾಗಿ ಟೀಕಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಮತ್ತು ಮಾಫಿಯಾವನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್ ಎಂದು ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರಂ ಸಿಂಗ್ ಅವರ ಅಧಿಕಾರಾವಧಿಯೊಂದರಲ್ಲೇ ಕಾಂಗ್ರೆಸ್ ಪಕ್ಷವು 44 ಗಣಿಗಳಿಗೆ ಅನುಮತಿ ನೀಡಿದ್ದದರೆ, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಹಿಂದಿನ ಜೆಡಿಎಸ್-ಬಿಜೆಪಿ ಸರಕಾರವು 47 ಗಣಿಗಳಿಗೆ ಅನುಮತಿ ನೀಡಿತ್ತು. ಮೈತ್ರಿ ಸರಕಾರ ಪತನಾನಂತರ ರಾಷ್ಟ್ರಪತಿ ಆಳ್ವಿಕೆಯ ಅವಧಿಯಲ್ಲಿ ಸುಮಾರು 20 ಗಣಿಗಳು ಆರಂಭವಾಗಿದ್ದವು ಎಂದು ವಿವರಿಸಿದರು.
2008ರ ಮೇ ತಿಂಗಳಲ್ಲಿ ಅಧಿಕಾರಕ್ಕೇರಿದ ಬಿಜೆಪಿ, ಮೌಲ್ಯಾಧಾರಿತ ಉತ್ಪನ್ನಗಳಿಗಾಗಿ ಕೆಲವು ಗಣಿಗಳನ್ನು ಹೊರತುಪಡಿಸಿದರೆ ಬೇರಾವುದೇ ಗಣಿಗಾರಿಕೆ ಅನುಮತಿಯನ್ನೂ ನೀಡಿಲ್ಲ ಎಂದ ಯಡಿಯೂರಪ್ಪ, ವಾಸ್ತವವಾಗಿ ಗಣಿ ಕಾಯಿದೆಯನ್ನು ಪರಿಚಯಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದರು.
ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಐದಂಶಗಳ ಕಾರ್ಯಕ್ರಮ ಮುಂದಿಟ್ಟುಕೊಂಡು ಸರಕಾರದ ಮೇಲೆ ಮುಗಿಬೀಳುತ್ತಿದೆ. ಇದರಲ್ಲಿ ಅಕ್ರಮ ಗಣಿಗಾರಿಕೆ, ನೈಸ್ ಎಕ್ಸ್ಪ್ರೆಸ್ ಹೆದ್ದಾರಿ ಯೋಜನೆ, ವಿದ್ಯುತ್ ಕೊರತೆ, ರಾಜ್ಯದ ಹಣಕಾಸು ಸ್ಥಿತಿ ಮತ್ತು ಪ್ರವಾಹ ಪರಿಹಾರಗಳು ಈ ಪಕ್ಷಗಳ ದಾಳಿಯ ಪ್ರಮುಖ ವಿಷಯವಾಗಿಬಿಟ್ಟಿದೆ. ಆದರೆ ಅವರೇನು ಹೇಳುತ್ತಿದ್ದಾರೋ, ಅವೆಲ್ಲವೂ ನಿರಾಧಾರ ಎಂದು ನುಡಿದರು.
ಕಾಂಗ್ರೆಸ್ ಪಕ್ಷವು ಕಳೆದ 40 ವರ್ಷಗಳಿಂದ ಮಾಡಲಾಗದ್ದನ್ನು ನಾವು ಒಂದು ವರ್ಷದಲ್ಲಿ ಮಾಡಿದ್ದೇವೆ. ಈಗಿರುವ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವನ್ನು 1000 ಮೆಗಾವ್ಯಾಟ್ನಷ್ಟು ಹೆಚ್ಚು ಮಾಡಿದ್ದೇವೆ ಎಂದ ಅವರು, ಮುಂದಿನ ಐದು ವರ್ಷಗಳಲ್ಲಿ ಇನ್ನೂ 5000 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.