ಬಳ್ಳಾರಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಧೂಳೀಪಟ: ಸಿದ್ದರಾಮಯ್ಯ
ಬೆಂಗಳೂರು, ಮಂಗಳವಾರ, 5 ಜನವರಿ 2010( 15:02 IST )
NRB
ದೇಶದ ಎಲ್ಲೆಡೆ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಆದರೆ ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಧೂಳೀಪಟವಾಗಿದೆ ಎಂದು ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೂಡ್ಲಿಗಿಯ ಕಾನಾ ಹೊಸಹಳ್ಳಿಯಲ್ಲಿ ನಡೆದ 522ನೇ ಕನಕ ಜಯಂತ್ಯೋತ್ವ ಉದ್ಘಾಟಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಿದ್ದು, ವಚನಭ್ರಷ್ಟವಾಗಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಹಿಂದೆಂದೂ ಇಂಥ ಸರ್ಕಾರವನ್ನು ಕಂಡಿರಲಿಲ್ಲ. ದೇವರಾಜ ಅರಸು ಮುಖ್ಯಮಂತ್ರಿ ಆಗದಿದ್ದಲ್ಲಿ ಹಾಗೂ ಹಾವನೂರು ವರದಿ ಅನುಷ್ಠಾನವಾಗದೆ ಇದ್ದರೆ ಇಂದು ಹಿಂದುಳಿದ ವರ್ಗದವರಿಗೆ ಶೋಷಿತರಿಗೆ ಮೀಸಲಾತಿ ಸಿಗುತ್ತಿರಲಿಲ್ಲ ಎಂದರು.
12ನೇ ಶತಮಾನದಲ್ಲಿ ಬಸವಣ್ಣನವರೇ ಸಂವಿಧಾನದ ಕಲ್ಪನೆ ಅನುಷ್ಠಾನಗೊಳಿಸಿದ್ದರು. ಅನುಭವ ಮಂಟಪಕ್ಕೆ ಶೋಷಿತರಾದ ಅಲ್ಲಮಪ್ರಭು ಅವರನ್ನು ಅಧ್ಯಕ್ಷರನ್ನಾಗಿಸಿದ್ದರು. ಆ ಮೂಲಕ ಮೀಸಲಾತಿ ಕಲ್ಪನೆಗೆ ಅಂದು ಚಾಲನೆ ನೀಡಿದ್ದರು ಎಂದು ವಿಶ್ಲೇಷಿಸಿದರು.