ಕುಮಾರವ್ಯಾಸನ ನಾಡಲ್ಲಿ ಅಖಿಲ ಭಾರತ 76ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ವಿಧ್ಯುಕ್ತವಾಗಿ ಚಾಲನೆ ನೀಡುವ ಮೂಲಕ 3ದಿನಗಳ ಕಾಲ ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಅಕ್ಷರ ಜಾತ್ರೆ ನಡೆಯಲಿದೆ.
ಸಮ್ಮೇಳನಕ್ಕೆ ಚಾಲನೆ ನೀಡುವ ಮುನ್ನ ಬೆಳಿಗ್ಗೆ ಭೂಮಿ ರೆಡ್ಡಿ ವೃತ್ತದಿಂದ ಹೊರಟ ಪೂರ್ಣಕುಂಭ ಮೆರವಣಿಗೆ ಸಮ್ಮೇಳನ ನಡೆಯುವ ವಿದ್ಯಾದಾನ ಕಾಲೇಜು ಮೈದಾನದವರೆಗೆ ನಡೆಸಲಾಯಿತು. ಸಮ್ಮೇಳನಾಧ್ಯಕ್ಷೆ ಡಾ.ಗೀತಾ ನಾಗಭೂಷಣ್ ಅವರನ್ನು ತೆರೆದ ಜೀಪಿನಲ್ಲಿ ಕರೆ ತರಲಾಯಿತು. ಸಚಿವ ಶ್ರೀರಾಮುಲು ಧ್ವಜಾರೋಹಣ ನೆರವೇರಿಸಿ, ಸಾಹಿತ್ಯ ತೇರಿಗೆ ಚಾಲನೆ ನೀಡಿದರು.
ಸುಮಾರು 49ವರ್ಷಗಳ ಬಳಿಕ ಕುಮಾರವ್ಯಾಸನ ನಾಡಲ್ಲಿ ಸಾಹಿತ್ಯ ಜಾತ್ರೆ ನಡೆಯುತ್ತಿದ್ದು, ಇಡೀ ನಗರವೇ ನವವಧುವಿನಂತೆ ಸಿಂಗಾರಗೊಂಡಿದೆ. ಅಲ್ಲದೇ, ಗದಗ ನಿವಾಸಿಗಳು, ಸಾಹಿತ್ಯಾಭಿಮಾನಿಗಳು ಬೆಳಿಗ್ಗಿನಿಂದಲೇ ಸಮ್ಮೇಳನಕ್ಕೆ ಆಗಮಿಸುತ್ತಿದ್ದಾರೆ.
ಸಮ್ಮೇಳನದ ಮುಖ್ಯದ್ವಾರವನ್ನು ಉತ್ತರ ಕರ್ನಾಟಕ ಗ್ರಾಮೀಣ ಭಾಗದ ದೊಡ್ಡಮನೆಯ ಮುಂಭಾಗದಂತೆ ಸಿದ್ದಪಡಿಸಲಾಗಿದೆ. ದ್ವಾರದ ಇಕ್ಕೆಲಗಳಲ್ಲಿ ಜ್ಞಾನಪೀಠ ಪಡೆದ ಹಾಗೂ ಹಿರಿಯ ಸಾಹಿತಿಗಳ ಚಿತ್ರ ಬಿಡಿಸಲಾಗಿದೆ.
ಪುಸ್ತಕ ಜಾತ್ರೆ: ಸಮ್ಮೇಳನದಲ್ಲಿ 350ಕ್ಕೂ ಹೆಚ್ಚು ಪುಸ್ತಕ ಮಳಿಗಳಿವೆ. ಮುಖ್ಯ ವೇದಿಕೆಯ ಗೋಷ್ಠಿಗಳನ್ನು 25ಸಾವಿರ ಜನರು ವೀಕ್ಷಿಸಲು ಅನುಕೂಲವಾಗುವಂತೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮೂರು ದಿನಗಳ ಕಾಲ ವಿವಿಧ ಗೋಷ್ಠಿಗಳು ನಡೆಯಲಿದೆ.
ಬಿಗಿ ಬಂದೋಬಸ್ತ್: 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಆ ನಿಟ್ಟಿನಲ್ಲಿ ಆರು ಕೆಎಸ್ಆರ್ಪಿ ತಂಡ, 1,400ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಪ್ರಕಾಶ್ ತಿಳಿಸಿದ್ದಾರೆ.
ಸಮ್ಮೇಳನದ ಮೇಲೆ ಕಣ್ಣಿಡಲು ಒಟ್ಟು 18ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮುಖ್ಯ ವೇದಿಕೆಯ ವಿವಿಧೆಡೆ 12, ಊಟ ಹಾಗೂ ಇತರ ವೇದಿಕೆಗಳ ಬಳಿ 6ಸಿಸಿ ಕ್ಯಾಮರಾಗಳನ್ನು ಇಡಲಾಗಿದೆ ಎಂದು ವಿವರಿಸಿದ್ದಾರೆ.