ರಾಜ್ಯದ ರೈತರು ಸಹನಾಶೀಲರು ಅವರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪರೋಕ್ಷವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಎಚ್ಚರಿಸಿದರು.
ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ತಾಳ್ಮೆ ಪರೀಕ್ಷಿಸಿದರೆ ಸರಿ ಇರುವುದಿಲ್ಲ ಎಂದು ಕಿಡಿಕಾರಿದರು. ಈ ಹಿಂದಿನ ರೈತರ ಚಳವಳಿಗಳನ್ನು ನೋಡಿದಾಗ ಸರ್ಕಾರದ ಸ್ಥಿತಿಗತಿಗಲು ಏನಾಗಿದೆ ಎಂಬುದನ್ನು ಗಮನಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದ 26ಜಿಲ್ಲೆಗಳಲ್ಲಿ ಸುಮಾರು 1ಲಕ್ಷ 76ಸಾವಿರದ 323 ಎಕರೆ ಕೃಷಿ ಜಮೀನಿನ ವಶಕ್ಕೆ ಪಡೆಯಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರ ಸಂಪೂರ್ಣ ದಾಖಲಾತಿ ತಮ್ಮ ಬಳಿ ಇದೆ ಎಂದರು.
ಭೂಸ್ವಾಧೀನ ಅವೈಜ್ಞಾನಿಕವಾಗಿದೆ ಎಲ್ಲಾ ರೀತಿಯ ಮಾನದಂಡಗಳನ್ನು ಗಾಳಿಗೆ ತೂರಲಾಗಿದೆ. ಯಾವುದೇ ಪೂರ್ವಭಾವಿ ಸಿದ್ದತೆ ಇಲ್ಲದೆ ಸರ್ಕಾರ ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.