ಪ್ರತಿವರ್ಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳನ್ನು ರಾಜ್ಯ ಸರ್ಕಾರ ಕಾರ್ಯಗತ ಮಾಡುತ್ತಿಲ್ಲ ಎಂದು ಆರೋಪಿಸಿ ಕನ್ನಡ ವಾಟಾಳ್ ಪಕ್ಷ ನಗರದಲ್ಲಿ ಶುಕ್ರವಾರ ವಿನೂತನವಾಗಿ ಪ್ರತಿಭಟನೆ ನಡೆಸಿತು.
ಶಾಸಕರ ಭವನದ ಮುಂದೆ ಪಕ್ಷದ ಅಧ್ಯಕ್ಷ ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರು ಎಮ್ಮೆ ಮೆರವಣಿಗೆ ಹಾಗೂ ತಮಟೆಗಳನ್ನು ಬಾರಿಸುವುದರ ಮುಖಾಂತರ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿವರ್ಷವು ನಿರ್ಣಯಗಳನ್ನು ಮಾಡಲಾಗುವುದು. ಆದರೆ ಅವು ಸಮರ್ಪಕವಾಗಿ ಕಾರ್ಯಗತವಾಗುತ್ತಿಲ್ಲ ಎಂದು ದೂರಿದರು. ಮುಖ್ಯಮಂತ್ರಿಗಳ ಭರವಸೆಗಳು ಕೂಡ ಈಡೇರುತ್ತಿಲ್ಲ ಎಂದು ವಾಟಾಳ್ ಆರೋಪಿಸಿದರು.
ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು, ಕವಿಗಳು, ಸಾಹಿತ್ಯ ಪ್ರೇಮಿಗಳು ಭಾಗವಹಿಸಿ ಮಾಡಿದ ನಿರ್ಣಯಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಹೇಳಿದ ಅವರು ಸರ್ಕಾರದ ಧೋರಣೆಯನ್ನು ಖಂಡಿಸಿದರು.