ಬಿಬಿಎಂಪಿ ಚುನಾವಣೆ ವಿಷಯದಲ್ಲಿ ಕಾನೂನಿನ ಅಡಕತ್ತರಿಯಲ್ಲಿ ಸಿಲುಕಿರುವ ರಾಜ್ಯ ಸರ್ಕಾರ ಕೊನೆಯ ಪ್ರಯತ್ನ ಎಂಬಂತೆ ಶುಕ್ರವಾರ ಮತ್ತೆ ಹೈಕೋರ್ಟ್ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದೆ.
ಬಿಬಿಎಂಪಿ ಚುನಾವಣೆ ನಡೆಸುವ ಕುರಿತ ಕಾನೂನು ಸಮರದಲ್ಲಿ ಹೈಕೋರ್ಟ್ ಈಗಾಗಲೇ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿ, ಮಾ.30ರೊಳಗೆ ಚುನಾವಣೆ ನಡೆಸುವಂತೆ ಅಂತಿಮ ತೀರ್ಪು ನೀಡುವ ಮೂಲಕ ಆದೇಶ ನೀಡಿತ್ತು.
ಆದರೆ ಈ ಅಲ್ಪಾವಧಿಯಲ್ಲಿ ವಾರ್ಡ್ವಾರು ಮೀಸಲಾತಿ ಪಟ್ಟಿ ಸಲ್ಲಿಸುವುದು ಅಸಾಧ್ಯ ಎಂದು ಮತ್ತೊಮ್ಮೆ ಹೈಕೋರ್ಟ್ಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ, ಸಮಯಾವಕಾಶ ಕೋರಿದೆ.
ಹೈಕೋರ್ಟ್ನ ವಿಭಾಗೀಯ ಪೀಠದ ತೀರ್ಪಿಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದ್ದು, ಫೆ.22ರಂದು ವಿಚಾರಣೆ ನಡೆಸುವುದಾಗಿ ಹೇಳಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸುಪ್ರೀಂಕೋರ್ಟ್ ಸಹ ಹೆಚ್ಚಿನ ಸಮಯಾವಕಾಶ ಬೇಕಿದ್ದರೆ ಹೈಕೋರ್ಟ್ನಲ್ಲಿ ಮನವಿ ಮಾಡಿಕೊಳ್ಳಿ ಎಂದು ನಿನ್ನೆ ಮೌಖಿಕವಾಗಿ ಹೇಳಿರುವುದನ್ನು ಸದುಪಯೋಗಪಡಿಸಿಕೊಳ್ಳುವ ಕೊನೆಯ ಅಸ್ತ್ರ ಎಂಬಂತೆ ರಾಜ್ಯ ಸರ್ಕಾರ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದೆ.