ಯಡಿಯೂರಪ್ಪಗೆ ದಲಿತರ ಬಗ್ಗೆ ನಿರ್ಲಕ್ಷ್ಯ: ಜಿಗಜಿಣಗಿ ಆಕ್ರೋಶ
ಬಿಜಾಪುರ, ಶನಿವಾರ, 20 ಫೆಬ್ರವರಿ 2010( 10:55 IST )
ಬಿಜೆಪಿಯಲ್ಲಿ ಮತ್ತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಪಸ್ವರದ ಧ್ವನಿ ಏಳತೊಡಗಿದೆ. ಮುಖ್ಯಮಂತ್ರಿಗಳು ದಲಿತ ಸಮುದಾಯದತ್ತ ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ಸರಿಪಡಿಸಿಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಸಂಸದ ರಮೇಶ್ ಜಿಗಜಿಣಗಿ ಗುಡುಗಿದ್ದಾರೆ.
ಬಿಜೆಪಿಗೆ ಚುನಾವಣೆಯಲ್ಲಿ ದಲಿತರ ಮತ ಬೇಕು. ಆದರೆ ಆಡಳಿತದಲ್ಲಿ ದಲಿತರಿಗೆ ಅವಕಾಶ ಬೇಡ ಎನ್ನುವ ಪಕ್ಷದ ನಿಲುವು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸೋಮಣ್ಣನನ್ನು ಮೇಲ್ಮನೆಗೆ ನಾಮಕರಣ ಮಾಡಲು ಮುಖ್ಯಮಂತ್ರಿಗಳು ಕಸರತ್ತು ನಡೆಸುತ್ತಾರೆ. ಆದರೆ ಪಕ್ಷದಲ್ಲಿ ಸಾಕಷ್ಟು ಮಂದಿ ದಲಿತರಿದ್ದಾರೆ, ಅವರಿಗೂ ಅವಕಾಶ ನೀಡಲು ಮುಂದಾಗಲಿ ಎಂದು ಸಲಹೆ ನೀಡಿದರು.
ಬಿಜಾಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಸಮನ್ವಯ ಸಮಿತಿಯಲ್ಲಿ ದಲಿತರಿಗೆ ಸೂಕ್ತ ಸ್ಥಾನಮಾನ ನೀಡದಿರುವ ಬಗ್ಗೆ ಮತ್ತೊಮ್ಮೆ ಕಿಡಿಕಾರಿದ್ದು, ಯಡಿಯೂರಪ್ಪ ಈ ಎಡಬಿಡಂಗಿತನ ಬಿಡದಿದ್ದರೆ ಇದು ಬಿಜೆಪಿಗೆ ಉರುಳಾಗಲಿದೆ ಎಂದು ಎಚ್ಚರಿಸಿದ್ದಾರೆ.