ಮಹಾತ್ಮಗಾಂಧಿ, ಜವಾಹರಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಹೆಸರು ಕೇಳಿದ್ರೆ ಬಿಜೆಪಿಯರಿಗೆ ಅಲರ್ಜಿ, ಹೀಗಾಗಿ ಕೇಂದ್ರ ಸರ್ಕಾರ ಇವರ ಹೆಸರಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ರಾಜ್ಯ ಬಿಜೆಪಿ ಸರ್ಕಾರಕ್ಕೆ ಆಸಕ್ತಿ ಇಲ್ಲ ಎಂದು ಸಂಸದ ಎಚ್.ವಿಶ್ವನಾಥ್ ದೂರಿದ್ದಾರೆ.
ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಮಹಾತ್ಮಗಾಂಧಿಯನ್ನು ಕಂಡರೆ ಆಗೋಲ್ಲ. ಆ ಕಾರಣದಿಂದಲೇ ಮಹಾತ್ಮಗಾಂಧಿ ಹೆಸರಲ್ಲಿ ಜಾರಿಗೆ ತಂದಿರುವ ನರೇಗಾ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದರು.
ಅಲ್ಲದೇ ಈವರೆಗೂ ಮುಖ್ಯಮಂತ್ರಿ, ಮಂತ್ರಿಗಳಾಗಲಿ ಒಂದೇ ಒಂದು ಪ್ರಗತಿ ಪರಿಶೀಲನಾ ಸಭೆ ನಡೆಸಿಲ್ಲ, ಹಾಗೆಯೇ ಇಂದಿರಾ ಅವಾಸ್, ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆ ಬಗ್ಗೆಯೂ ಆಸಕ್ತಿ ತೋರಿಲ್ಲವಾದ್ದರಿಂದ ಪ್ರಗತಿ ಹೊಂದಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ನೆಹರು ಸಮಗ್ರ ಪಟ್ಟಣಗಳ ಅಭಿವೃದ್ಧಿ ಯೋಜನೆಯಲ್ಲಿ ಬೆಂಗಳೂರಿಗೆ 5ಸಾವಿರ ಕೋಟಿ, ಮೈಸೂರಿಗೆ 2ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಆದರೆ ಸರ್ಕಾರ ಸಂಬಂಧ ಪಟ್ಟ ಇಲಾಖೆ ಯೋಜನೆ ಕಾರ್ಯಗತಗೊಳಿಸುವಲ್ಲಿ ನಿರ್ಲಕ್ಷ ತೋರಿಸಿದೆ ಎಂದು ಆಪಾದಿಸಿದರು.