ಇರಾನಿ ಯುವತಿಯರು ಕುಡಿದ ಮತ್ತಿನಲ್ಲಿ ಎಸ್ಐ ಕೆನ್ನೆಗೆ ಬಾರಿಸಿ ರಂಪಾಟ ನಡೆಸಿದ ಘಟನೆಯ ನಡುವೆಯೇ, ಅಪಘಾತ ಮಾಡಿದರೆಂಬ ಕಾರಣಕ್ಕೆ ಯುವತಿಯೊಬ್ಬಳು ವ್ಯಕ್ತಿಯೊಬ್ಬರ ಕಣ್ಣಿಗೆ ಪೆಪ್ಪರ್ ಸ್ಪ್ರೇ (ಕಾಳು ಮೆಣಸಿನ ಪುಡಿ) ಸಿಂಪಡಿಸಿ ರಾದ್ಧಾಂತ ಎಬ್ಬಿಸಿದ್ದಾಳೆ.
ಕಳೆದ ರಾತ್ರಿ ಸಂಜನ್ ದಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಅಟಲ್ ಅರುಣ್ ಮಿಂಜ್ ಎಂಬ ಯುವಕ ಅಕ್ಷತಾಳ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಆಕ್ರೋಶಗೊಂಡ ಅಕ್ಷತಾ ಮಧ್ಯ ರಸ್ತೆಯಲ್ಲಿಯೇ ಅಟಲ್ ವಿರುದ್ಧ ರಂಪಾಟ ನಡೆಸಿ, ಬೈಗುಳದ ಸುರಿಮಳೆ ಸುರಿಸಿ ಪೆಪ್ಪರ್ ಸ್ಪ್ರೇ ಮಾಡಿದ್ದಳು!
ಉರಿಯಿಂದ ಕಿರುಚುತ್ತಿದ್ದ ಅರುಣ್ನನ್ನು ಕಂಡ ಸ್ಥಳೀಯರು ಅಕ್ಷತಾಳನ್ನು ಹಿಡಿಯಲು ಮುಂದಾಗಿದ್ದಾರೆ. ಮತ್ತಷ್ಟು ಸಿಟ್ಟಾದ ಆಕೆ ತನ್ನ ಬಳಿ ಉಳಿದಿದ್ದ ಕಾಳು ಮೆಣಸಿನ ಪುಡಿಯನ್ನು ಸಾರ್ವಜನಿಕರ ಮೇಲೂ ಸಿಂಪಡಿಸಿದ್ದಾಳೆ. ಆದರೆ ಘಟನೆಯಲ್ಲಿ ಯಾರ ಕಣ್ಣಿಗೂ ಅದು ಬಿದ್ದಿಲ್ಲ ಎಂದು ಪೊಲೀಸರು ತಿಳಿಸಿದ್ದು, ಇದೀಗ ಅಕ್ಷತಾಳ ವಿರುದ್ಧ ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.