ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ರಾಜ್ಯದ ಅಭಿವೃದ್ಧಿಯ ವಿರೋಧಿಗಳಾಗಿದ್ದಾರೆ ಎಂದು ಕಿಡಿಕಾರಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದಂಡಾವತಿ ನೀರಾವರಿ ಯೋಜನೆ ಜಾರಿ ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.
ಶನಿವಾರ ನಗರದಲ್ಲಿನ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ, ದಂಡಾವತಿ ನೀರಾವರಿ ಯೋಜನೆ ಜಾರಿ ಕುರಿತಂತೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಜತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ದಂಡಾವತಿ ನೀರಾವರಿ ಯೋಜನೆ ಕುರಿತು ಈ ಮೊದಲು ಬಂಗಾರಪ್ಪನವರು ಪತ್ರ ಬರೆದು, ಇದು ತುಂಬಾ ಒಳ್ಳೆಯ ಯೋಜನೆ ಆಗಿದೆ. ಶೀಘ್ರವೇ ಜಾರಿಗೊಳಿಸಿ ಎಂದಿದ್ದರು. ಈಗ ಏಕಾಏಕಿ ವಿರೋಧಿಸುತ್ತಾರೆಂದರೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.
ಆದರೆ ಯಾವುದೇ ಕಾರಣಕ್ಕೂ ದಂಡಾವತಿ ನೀರಾವರಿ ಯೋಜನೆಯನ್ನು ಕೈಬಿಡುವುದಿಲ್ಲ ಎಂದ ಅವರು, ಅದಕ್ಕಾಗಿ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ ಎಂದರು. ಅಲ್ಲದೇ ಸಿಎಂ ಜತೆ ನಡೆದ ಚರ್ಚೆಯ ಸಂದರ್ಭದಲ್ಲಿ, ನೀರಾವರಿ ಯೋಜನೆ ಜಾರಿಯನ್ನು ಕೈಬಿಡುವಂತೆ ಜಿಲ್ಲಾ ಬಿಜೆಪಿ ಒತ್ತಡ ಹೇರಿರುವುದಾಗಿ ಮೂಲಗಳು ತಿಳಿಸಿವೆ.