ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ನನ್ನ ವಿರುದ್ಧ ಲಘುವಾಗಿ ಮಾತನಾಡುವುದನ್ನು ಮುಂದುವರಿಸಿದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಎಚ್ಚರಿಸಿದ್ದಾರೆ.
ಜವಾಬ್ದಾರಿ ಸ್ಥಾನದಲ್ಲಿರುವ ದೇಶಪಾಂಡೆ ಕಾನೂನನ್ನು ಅರ್ಥಮಾಡಿಕೊಳ್ಳಬೇಕು. ದೇಶಪಾಂಡೆ ಮನಸ್ಸಿಗೆ ಬಂದಂತೆ ಮಾತಾಡಿದರೆ ಅವರಿಗೆ ಮಾರ್ಗರೆಟ್ ಆಳ್ವ ಹೇಳಿಕೆ ನೆನಪಿಸಿ ಕೊಡಬೇಕಾಗುತ್ತದೆ ಎಂದರು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನವರು ಟಿಕೆಟ್ ಮಾರಿರುವುದಾಗಿ ಆಳ್ವ ಹೇಳಿದ್ದರು. ಆ ರೀತಿ ಆಗುವುದು ಕಾಂಗ್ರೆಸ್ನಲ್ಲಿ ಮಾತ್ರ ಎಂದು ತಿರುಗೇಟು ನೀಡಿದರು.
ಸರ್ಕಾರ ಅನಧಿಕೃತ ಕಾಲೇಜುಗಳಿಂದ ಹಣ ವಸೂಲಿ ಮಾಡುತ್ತಿದೆ ಎಂದು ದೇಶಪಾಂಡೆ ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸುಪ್ರೀಂಕೋರ್ಟ್ ಸೂಚನೆಯಂತೆ ಅನಧಿಕೃತ ಕಾಲೇಜುಗಳ ಪಟ್ಟಿ ಮಾಡಲಾಗಿದೆ. ಬೇಕಾದಲ್ಲಿ ಪಟ್ಟಿಯ ಒಂದು ಪ್ರತಿಯನ್ನು ದೇಶಪಾಂಡೆಗೆ ಕಳಿಸಲಾಗುವುದು ಎಂದು ಕಿಡಿಕಾರಿದ್ದಾರೆ.