ಸ್ಥಳೀಯರ ತೀವ್ರ ಆಕ್ರೋಶ, ಪ್ರತಿಭಟನೆಯ ನಡುವೆಯೂ ನಗರದ ಮತ್ತಿಕೆರೆ ಮೇಲುಸೇತುವೆಯ ಕೆಳಭಾಗದ ರಸ್ತೆ ಅಗಲೀಕರಣಕ್ಕಾಗಿ 80ಕ್ಕೂ ಅಧಿಕ ಮನೆಗಳನ್ನು ಬಿಬಿಎಂಪಿ ಸಿಬ್ಬಂದಿಗಳು ಕೆಡವಿ ಹಾಕಿದ್ದಾರೆ.
ಮನೆಗಳನ್ನು ಕೆಡವಿ ಹಾಕುವ ಮೂಲಕ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಸ್ಥಳೀಯ ನಿವಾಸಿಗಳನ್ನು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು.
ಎಂ.ಎಸ್.ರಾಮಯ್ಯ ರಸ್ತೆಯ ಮತ್ತಿಕೆರೆ ಮೇಲ್ಸೆತುವೆ ಕೆಳಭಾಗದಲ್ಲಿ ಆಗಾಗ ಸಂಚಾರ ವ್ಯವಸ್ಥೆಗೆ ವ್ಯತ್ಯಯ ಉಂಟಾಗುತ್ತಿತ್ತು. ಹಾಗಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಮನೆಗಳನ್ನು ಕೆಡವಿ ಹಾಕಲು ಪಾಲಿಕೆ ನಿರ್ಧರಿಸಿತ್ತು. ಆ ನಿಟ್ಟಿನಲ್ಲಿ ಶನಿವಾರ ಬೆಳಿಗ್ಗೆ ಬಿಬಿಎಂಪಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ 7-8ಜೆಸಿಬಿ ಯಂತ್ರಗಳ ಸಹಾಯದಿಂದ ಮನೆ ಕೆಡವಿ ಹಾಕುವ ಕಾರ್ಯಾಚರಣೆ ನಡೆಸುತ್ತಿದ್ದಂತೆಯೇ ಸ್ಥಳೀಯರು ಅಡ್ಡಿಪಡಿಸಿದರು.
ನಮಗೆ ಯಾವುದೇ ನೋಟಿಸ್ ಕೂಡ ನೀಡದೆ ಏಕಾಏಕಿ ಮನೆ ಕೆಡವಿ ಹಾಕಿದರೆ, ನಾವೆಲ್ಲಿಗೆ ಹೋಗಬೇಕು ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು, ಈ ಕಾರ್ಯಾಚರಣೆಯಿಂದ ನಮ್ಮ ಮಕ್ಕಳ ಶಿಕ್ಷಣಕ್ಕೆ ಹೊಡೆತ ಬಿದ್ದಂತಾಗಿದೆ ಎಂದು ದೂರಿದರು. ಈ ಮನೆಗಳಿಗೆ ಪರ್ಯಾಯವಾಗಿ ಬೇರೊಂದು ಸ್ಥಳದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿದ್ದಾರೆ. ಈ ಶೆಡ್ಗಳು ಪ್ರಾಣಿಗಳು ವಾಸ ಮಾಡಲು ಯೋಗ್ಯವಿಲ್ಲ ಎಂದು ಕಿಡಿಕಾರಿದರು.