ತನ್ನ ಪತ್ನಿಯ ತಂಗಿಯನ್ನೇ ಅಪಹರಣ ಮಾಡಿ ವಿವಾಹವಾಗಿದ್ದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ. ನರಸಿಂಹಮೂರ್ತಿ ಹಾಗೂ ಶ್ರೀನಿವಾಸ್ ಬಂಧಿತ ವ್ಯಕ್ತಿಗಳಾಗಿದ್ದಾರೆ.
ಶಿಡ್ಲಘಟ್ಟದ ದಿಂಬಾಕ್ಷಹಳ್ಳಿಯ ನರಸಿಂಹಮೂರ್ತಿ, ಬೆಂಗಳೂರಿನ ತನ್ನ ಚಿಕ್ಕಮ್ಮ ಅವರ ಮನೆಯಲ್ಲಿ ವಾಸವಿದ್ದ ಹೆಂಡತಿಯ ತಂಗಿ ಚೈತ್ರಾಳನ್ನು ಶ್ರೀನಿವಾಸ್ ಎಂಬಾತನ ಸಹಾಯದಿಂದ ಅಪಹರಣ ಮಾಡಿ ಧರ್ಮಸ್ಥಳದಲ್ಲಿ ವಿವಾಹವಾಗಿದ್ದ.
ಘಟನೆಗೆ ಸಂಬಂಧಿಸಿದಂತೆ ನರಸಿಂಹಮೂರ್ತಿಯ ಪತ್ನಿ ಮಂಜುಳಾ ಹಾಗೂ ಯುವತಿಯ ಚಿಕ್ಕಮ್ಮ ನಾರಾಯಣಮ್ಮ ಎಂಬುವರು ನೀಡಿದ ದೂರಿನ ಮೇರೆಗೆ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಚೈತ್ರಾ ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣಳಾದ ಹಿನ್ನೆಲೆಯಲ್ಲಿ ಮುನಿರೆಡ್ಡಿಪಾಳ್ಯದಲ್ಲಿ ತನ್ನ ಚಿಕ್ಕಮ್ಮ ನಾರಾಯಣಮ್ಮ ಎಂಬುವರ ಮನೆಯಲ್ಲಿ ವಾಸವಾಗಿ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದಳು. ಈ ವೇಳೆ ಚೈತ್ರಾಳ ಅಕ್ಕ ಮಂಜುಳಾ ಅವರ ಪತಿ ನರಸಿಂಹಮೂರ್ತಿ ಸಮಯ ಸಾಧಿಸಿ ಆಕೆಯನ್ನು ಅಪಹರಿಸಿದ್ದ. ನರಸಿಂಹ ಮೂರ್ತಿ ಶಿಡ್ಲಘಟ್ಟದವನಾಗಿದ್ದು, ಕಳೆದ 2003ರಲ್ಲಿ ಚೈತ್ರಾಳ ಅಕ್ಕ ಮಂಜುಳಾ ಎಂಬಾಕೆಯನ್ನು ವಿವಾಹವಾಗಿದ್ದ, ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ.