ರಾಜ್ಯದ ಹಾಲನ್ನು ನೆರೆಯ ರಾಜ್ಯಗಳಿಗೆ ಪೂರೈಕೆ ಮಾಡಿ, ದೇಶದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ ಹಾಲಿನ ಬರ ಎದುರಿಸುತ್ತಿದೆ.
ಹೌದು, ಕರ್ನಾಟಕ ಹಾಲು ಮಹಾಮಂಡಳಕ್ಕೆ (ಕೆಎಂಎಫ್) ಹರಿದು ಬರುತ್ತಿರುವ ಹಾಲಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಹಾಲಿನ ಕೊರತೆ ಉಂಟಾಗಿದೆ. ಈ ನಿಟ್ಟಿನಲ್ಲಿ ಕೆಎಂಎಫ್ ನೆರೆಯ ಮಹಾರಾಷ್ಟ್ತ್ರದಿಂದ ಪ್ರತಿದಿನ ಸರಾಸರಿ 50 ಸಾವಿರ ಲೀಟರ್ ಹಾಲನ್ನು ಖರೀದಿ ಮಾಡಿ ಗ್ರಾಹಕರಿಗೆ ಪೂರೈಕೆ ಮಾಡುತ್ತಿದೆ.
ಕಳೆದ ವರ್ಷ ಈ ವೇಳೆಗೆ ಸರಾಸರಿ ಪ್ರತಿದಿನ 34 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಅಲ್ಲದೇ, ಅಕ್ಟೋಬರಿನಲ್ಲಿ ಕೆಲ ದಿನಗಳ ಕಾಲ ಪ್ರತಿದಿನ ದಾಖಲೆಯ 40 ಲಕ್ಷ ಲೀಟರ್ ಹಾಲು ಸಂಗ್ರಹವಾಗಿತ್ತು. ಇಷ್ಟು ಹಾಲು ಸಂಗ್ರಹದಿಂದ 33 ಲಕ್ಷ ಲೀಟರ್ ಹಾಲಿನ ಬೇಡಿಕೆಯನ್ನು ಪೂರೈಸಲಾಗುತ್ತಿತ್ತು.
ಜೊತೆಗೆ ಬೆಂಗಳೂರಿನ ಗ್ರಾಹಕರಿಗೆ 14 ಲಕ್ಷ ಲೀಟರ್ ಹಾಲು ಪೂರೈಕೆ ಮಾಡಲಾಗುತ್ತಿತ್ತು. ಇಷ್ಟೇ ಅಲ್ಲ, ಹಾಲಿನ ಪುಡಿ, ಮೊಸರು ಉತ್ಪಾದನೆಗೂ ಬಳಸಿಕೊಳ್ಳಲಾಗುತ್ತಿತ್ತು. ಅಲ್ಲದೆ, ಹೊರರಾಜ್ಯಗಳಿಗೂ ಸರಬರಾಜು ಮಾಡಲಾಗುತ್ತಿತ್ತು.
ಬಳಿಕ ನವೆಂಬರಿನಿಂದ ರಾಜ್ಯದ ಹಾಲಿನ ಸಂಗ್ರಹ ಪ್ರಮಾಣ ಕುಂಠಿತ ಆರಂಭವಾಗಿದ್ದು, ಇನ್ನೂ ನಿಂತಿಲ್ಲ. ಇದಕ್ಕೆ ಹಾಲಿನ ದರ ಕಡಿಮೆಯಾಗಿರುವುದೇ ಕಾರಣವಾಗಿರಬಹುದು. ಇದೀಗ ಕೆಎಂಎಫ್ ಮಹಾರಾಷ್ಟ್ತ್ರದ ಮೊರೆ ಹೋಗಿದೆ.