ಗಣಿದಣಿಗಳ ವಿರುದ್ಧ ಸೊಲ್ಲೆತ್ತುವ ಶಕ್ತಿ ಸಿಎಂಗಿಲ್ಲ: ಕುಮಾರಸ್ವಾಮಿ
ಬೆಂಗಳೂರು, ಭಾನುವಾರ, 4 ಏಪ್ರಿಲ್ 2010( 17:53 IST )
ಗೃಹ ಸಚಿವರ ಪ್ರಕಾರ ಗಣಿಗಾರಿಕೆ ಕುರಿತು ಕೇಂದ್ರ ಸರಕಾರದಿಂದ ಪತ್ರ ಬಂದಿದೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪ್ರಕಾರ ಇಲ್ಲ; ಜನ ಯಾವುದನ್ನು ನಂಬಬೇಕು. ಇಂತಹ ಗೊಂದಲಗಳನ್ನು ಹುಟ್ಟು ಹಾಕುತ್ತಿರುವ ಯಡಿಯೂರಪ್ಪನವರಿಗೆ ಗಣಿದಣಿಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುವ ಶಕ್ತಿ ಇದೆಯೇ ಎಂದು ಜೆಡಿಎಸ್ ಮುಖ್ಯಸ್ಥ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಅಕ್ರಮ ಗಣಿಗಾರಿಕೆ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೇಂದ್ರ ಸರಕಾರವು ಬರೆದಿರುವ ಪತ್ರ ಬಂದಿದೆ ಎಂಬರ್ಥದಲ್ಲಿ ಗೃಹ ಸಚಿವ ವಿ.ಎಸ್. ಆಚಾರ್ಯ ಮಾತನಾಡುತ್ತಾರೆ. ಆದರೆ ಯಡಿಯೂರಪ್ಪನವರು ಯಾವುದೇ ಪತ್ರ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ನಿಜಕ್ಕೂ ಅವರು ಗಣಿಗಾರಿಕೆ ವಿಚಾರದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಉಳಿಸಿಕೊಂಡಿದ್ದಾರಾ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸರಕಾರವು ಎರಡೆರಡು ಬಾರಿ ಪತ್ರ ಬರೆದು ಅಕ್ರಮ ಗಣಿಗಾರಿಕೆ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಹೇಳಿದೆ. ಕಳೆದ ನವೆಂಬರ್ ತಿಂಗಳಲ್ಲಿ ಮೊದಲ ಪತ್ರ ಬರೆಯಲಾಗಿತ್ತು. ಮತ್ತೆ ಇದೀಗ ಕೇಂದ್ರ ಗಣಿಗಾರಿಕೆ ಸಚಿವ ಹಾಂಡಿಕ್ ಅವರು ಪತ್ರ ಬರೆದು ಸಿಬಿಐಗೆ ವಹಿಸುವಂತೆ ಹೇಳಿದ್ದಾರೆ. ಆದರೆ ಗಣಿದಣಿಗಳಿಗೆ ಶರಣಾಗಿರುವ ಮುಖ್ಯಮಂತ್ರಿಯವರು ಇದ್ಯಾವುದೂ ತನಗೆ ಗೊತ್ತಿಲ್ಲವೆಂಬಂತೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಆರೋಪಿಸಿದ್ದಾರೆ.
ಅತ್ತ ಮುಖ್ಯಮಂತ್ರಿಯವರು ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ಪತ್ರ ಬಂದಿಲ್ಲ ಎಂದು ತಿಳಿಸಿದ್ದಾರೆ. ನಿನ್ನೆ ರಾತ್ರಿ ಹುಬ್ಬಳ್ಳಿಯಲ್ಲಿ ಉಳಿದುಕೊಂಡಿದ್ದ ಅವರು ಇಂದು ಬೆಳಿಗ್ಗೆ ಮೂರು ಸಾವಿರ ಮಠಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಕುರಿತಂತೆ ಕೇಂದ್ರ ಸರಕಾರವು ಬರೆದಿರುವ ಯಾವುದೇ ಪತ್ರ ರಾಜ್ಯಕ್ಕೆ ತಲುಪಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 117 ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಅವುಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೇಂದ್ರ ಸರಕಾರವು ಎರಡನೇ ಬಾರಿ ಪತ್ರ ಬರೆದಿದೆ ಎಂದು ಹೇಳಲಾಗಿದೆ.