ಬೆಂಗಳೂರು: ಕನ್ನಡ ಸಾರಸ್ವತ ಲೋಕದ ಹೆಸರಾಂತ ವಿದ್ವಾಂಸರೂ, ಸಂಶೋಧಕರೂ ಆದ ಡಾ.ಶ್ರೀನಿವಾಸ ಹಾವನೂರು ಅವರು ಬೆಂಗಳೂರಿನಲ್ಲಿ ಸೋಮವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಅವರಿಗೆ 83 ವರ್ಷವಾಗಿತ್ತು.
ಹರ್ಮನ್ ಮೊಗ್ಲಿಂಗ್, ರೆವರೆಂಡ್ ಕಿಟ್ಟೆಲ್ ಮೊದಲಾದ ಹಿರಿಯರು ಕನ್ನಡಕ್ಕೆ ನೀಡಿರುವ ಕೊಡುಗೆಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಛಾತಿಯುಳ್ಳವರಾಗಿದ್ದ ಶ್ರೀನಿವಾಸ ಹಾವನೂರು, ಕನ್ನಡದ ಮೊದಲ ಪತ್ರಿಕೆ 'ಮಂಗಳೂರು ಸಮಾಚಾರ' ಕುರಿತು ಸಂಶೋಧನೆ ನಡೆಸಿದ್ದಾರೆ.
ಮೊದಲನೆಯ ಪೀಳಿಗೆಯ ಗಣಕ ಯಂತ್ರಗಳನ್ನು ಬಳಸಿ ಗ್ರಂಥಾಲಯ ಗಣಕೀಕರಣ, ಗ್ರಂಥಸೂಚಿ ಅಭಿವೃದ್ಧಿ, ಹೀಗೆ ಗ್ರಂಥಾಲಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಮತ್ತು ಈ ಕ್ಷೇತ್ರದಲ್ಲಿ ತಜ್ಞರೆಂದು ಗೌರವಿಸಲ್ಪಡುತ್ತಾರೆ. ಕನ್ನಡ ಪತ್ರಿಕೋದ್ಯಮಕ್ಕೂ ಇವರ ಸಂಶೋಧನೆಯಿಂದ ಸಾಕಷ್ಟು ಲಾಭವಾಗಿತ್ತು.