ಸತತವಾಗಿ ಕಳೆದ 30 ವರ್ಷಗಳಿಂದ ಆಯ್ಕೆಯಾಗುತ್ತಿದ್ದರೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದ ಬಸವರಾಜ ಹೊರಟ್ಟಿಯವರನ್ನು ಈ ಬಾರಿ ಮನೆಗೆ ಕಳಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಶಿಕ್ಷಕರಿಗೆ ಕರೆ ನೀಡಿದ್ದಾರೆ.
ಅವರು ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕುಬೇರಪ್ಪ ಪರ ಪ್ರಚಾರಕ್ಕಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಘಟಕ ಆಯೋಜಿಸಿದ ಪದಾಧಿಕಾರಿಗಳ ಚುನಾವಣೆ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಸಹಕಾರಿ ಮಂಡಳಿ ಚುನಾವಣೆಯಲ್ಲಿ ಎಚ್.ಕೆ.ಪಾಟೀಲರನ್ನು ಪರಾಭವಗೊಳಿಸಲಾಗಿದೆ. ಈ ಬಾರಿ ಹೊರಟ್ಟಿಯನ್ನು ಸೋಲಿಸಬೇಕು. ಆದ್ದರಿಂದ ಶಿಕ್ಷಕರ ಧ್ವನಿಯಾದ ಕುಬೇರಪ್ಪನವರ ಆಯ್ಕೆಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಪ್ರತಿಯೊಂದು ಚುನಾವಣೆಗೂ ಮುಂಚೆ ಬಿಜೆಪಿ ಸರಕಾರದ ಪತನದ ಬಗ್ಗೆ ಅರಚುವ ಪ್ರತಿಪಕ್ಷಗಳು ಚುನಾವಣೆ ಫಲಿತಾಂಶದಿಂದ ಆತಂಕಗೊಂಡು ಮೌನಕ್ಕೆ ಶರಣಾಗುತ್ತಿವೆ. ಇತ್ತೀಚೆಗೆ ನಡೆದ ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿ ಅಮೋಘ ಸಾಧನೆ ಮಾಡಿದೆ. ಬಿಜೆಪಿ ಸಾಧನೆಯಿಂದ ಪ್ರತಿ ಪಕ್ಷಗಳು ಕಂಗಾಲಾಗಿವೆ. ಸಹಕಾರಿ ಮಂಡಳಿಗಳ ಚುನಾವಣೆಯಲ್ಲಿ ಪಕ್ಷ ಅದ್ಬುತ ಯಶಸ್ಸು ಸಾಧಿಸಿದೆ. ಬಿಬಿಎಂಪಿ ಚುನಾವಣೆಯಲ್ಲಿ ಬಹುಮತ ಪಡೆದಿದೆ. ಗ್ರಾ.ಪಂ. ಚುನಾವಣೆಯಲ್ಲಿ ಶೇ. 60ಕ್ಕಿಂತ ಹೆಚ್ಚಿನ ಸಾಧನೆ ಗಳಿಸಿದೆ. ಶಿಕ್ಷಕರ ನಾಲ್ಕೂ ಮತಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವ ವಿಶ್ವಾಸವಿದೆ ಎಂದರು.
ಇದೇ ಸಂದರ್ಭದಲ್ಲಿ ದೇವೇಗೌಡರ ವಿರುದ್ಧ ಹರಿಹಾಯ್ದ ಅವರು, ಕುಪೇಂದ್ರ ರೆಡ್ಡಿ ಶಾಸಕರಿಗೆ ತಲಾ 50 ಲಕ್ಷ ರೂ. ನೀಡುತ್ತಾರೆಂಬ ಕಾರಣಕ್ಕೆ ರಾಜ್ಯಸಭೆಗೆ ಹರಿಪ್ರಸಾದ್ ಬದಲಿಗೆ ಕುಪೇಂದ್ರ ರೆಡ್ಡಿಯನ್ನು ಆಯ್ಕೆ ಮಾಡಲು ದೇವೇಗೌಡರು ಆಸಕ್ತಿ ತೋರುತ್ತಿದ್ದಾರೆ ಎಂದು ಆರೋಪಿಸಿದರು. ಕುಪೇಂದ್ರ ಆಯ್ಕೆ ನಿಟ್ಟಿನಲ್ಲಿ ಗೌಡರು ಕಾಂಗ್ರೆಸ್ ಜತೆ ಮಾತುಕತೆ ನಡೆಸುತ್ತಿದ್ದಾರೆ. 20 ವರ್ಷ ಜತೆಗಿದ್ದರೂ ಸಿದ್ಧ ರಾಮಯ್ಯನವರನ್ನು ಮುಖ್ಯಮಂತ್ರಿ ಮಾಡದ ದೇವೇಗೌಡರು ಈಗ, ಸಿದ್ಧರಾಮಯ್ಯ ಮುಖ್ಯಮಂತ್ರಿಯಾದರೆ ಬೆಂಬಲ ನೀಡುವುದಾಗಿ ಹೇಳುತ್ತಿದ್ದಾರೆ ಇದೆಂತ ವಿಪರ್ಯಾಸ ಎಂದು ವ್ಯಂಗ್ಯವಾಡಿದರು.