ವರ್ಷ ಕಳೆದ್ರೂ ನೆರೆಸಂತ್ರಸ್ತರಿಗೆ ಮನೆ ಇಲ್ಲ: ಎಸ್.ಆರ್. ನಾಯಕ್
ವಿಜಾಪುರ, ಮಂಗಳವಾರ, 27 ಜುಲೈ 2010( 15:31 IST )
ನೆರೆ ಸಂತ್ರಸ್ತ ಜಿಲ್ಲೆಯಲ್ಲಿನ ನಿರಾಶ್ರಿತರಿಗೆ ಒಂದೂ ಮನೆಯನ್ನು ನೀಡದಿರುವುದು ನೋವಿನ ಸಂಗತಿ. ನಿರಾಶ್ರಿತರಿಗೆ ಬದುಕು ಕಟ್ಟಿಕೊಡುವಲ್ಲಿ ಸರಕಾರ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯದಿಂದ ನಡೆದುಕೊಂಡಿವೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್.ನಾಯಕ್ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತಂತೆ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಸುದ್ದಿಗಾರರೊಂದಿಗೆಮಾತನಾಡಿದ ಅವರು , ನಿರಾಶ್ರಿತರಿಗೆ ವರ್ಷದೊಳಗೆ ಮನೆ ಕಟ್ಟಿಸಿಕೊಡುವುದಾಗಿ ಸರಕಾರ ಭರವಸೆ ನೀಡಿತ್ತು. ಆದರೆ, ಇದುವರೆಗೂ ಕೆಲಸ ಆಗಲಿಲ್ಲ. ಈ ಬಗ್ಗೆ ಸ್ವಯಂ ಪ್ರೇರಣೆಯಿಂದ ಸರಕಾರಕ್ಕೆ ನೋಟಿಸ್ ನೀಡಲಾಗಿತ್ತು. ವಿಜಾಪುರ ಜಿಲ್ಲೆಯಲ್ಲಿ 6795 ಮನೆ ನಿರ್ಮಿಸಿಕೊಡಬೇಕಿದ್ದು, ಇದುವರೆಗೂ ಒಂದೇ ಒಂದು ಮನೆಯನ್ನು ಸಂತ್ರಸ್ತರಿಗೆ ನೀಡಿಲ್ಲ ಎಂದು ದೂರಿದರು.
ಸಂತ್ರಸ್ತರಿಗೆ ಸರಕಾರದ ಕಾರಣಗಳು, ಭರವಸೆಗಳು ಬೇಕಿಲ್ಲ. ಅವರಿಗೆ ಸೂರು ಒದಗಿಸದಿದ್ದರೆ ಜಿಲ್ಲಾಡಳಿತ ಏಕಿರಬೇಕು. ಪರಿಹಾರ ಕಾರ್ಯದಲ್ಲಿ ತಾರತಮ್ಯವಾಗಿದೆ ಎಂಬ ದೂರುಗಳು ವ್ಯಾಪಕವಾಗಿವೆ. ಈ ಮಾತನ್ನು ರಾಜಕಾರಣಿಯಾಗಿ ಹೇಳುತ್ತಿಲ್ಲ. ಒಬ್ಬ ನ್ಯಾಯಾಧೀಶನಾಗಿ ನಿರಾಶ್ರಿತರ ನೋವು ಅರಿತು ಹೇಳುತ್ತಿದ್ದೇನೆ ಎಂದು ನಾಯಕ್ ತಿಳಿಸಿದರು.