ಗಣಿಗಾರಿಕೆಯನ್ನು ರಾಜಕಾರಣ ತಂತ್ರವಾಗಿಸಿಕೊಂಡು ಪಾದಯಾತ್ರೆ ಹೊರಟಿರುವ ಕಾಂಗ್ರೆಸ್ಸಿಗರು ಲೋಕಾಯುಕ್ತರ ಮೇಲೆ ವಿಶ್ವಾಸವಿದೆಯೋ ಇಲ್ಲವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ.
ಬಾಗಲಕೋಟೆ ನವನಗರ ಸೆಕ್ಟರ್ 22ರಲ್ಲಿ ಜಿಲ್ಲಾ ಬಿಜೆಪಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ಸಿಗರ ಬೇಡಿಕೆಯಂತೆ ಲೋಕಾಯುಕ್ತ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಅವರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ತನಿಖೆಯ ಅನುಕೂಲಕ್ಕಾಗಿ ಸಿಬಿಐ ಸಹಾಯ ಪಡೆಯಲು ಅನುಮತಿ ನೀಡಲಾಗಿದೆ. ಅಗತ್ಯ ಬಿದ್ದರೆ ವಿದೇಶಕ್ಕೆ ಹೋಗಿ ಬರುವ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಆದರೆ ಕಾಂಗ್ರೆಸ್ಸಿಗರು ಗಣಿ ತನಿಖೆಯನ್ನು ಸಿಬಿಐಗೆ ವಹಿಸಿ ಎನ್ನುವುದರಲ್ಲಿ ಅರ್ಥವಿಲ್ಲ. ಲೋಕಾಯುಕ್ತರ ವರದಿ ನಂತರ ಸರಕಾರ ಗಣಿ ಅವ್ಯವಹಾರದಲ್ಲಿ ಎಷ್ಟೆ ಪ್ರಭಾವಿಗಳೇ ಇದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಕಾಂಗ್ರೆಸ್ ಏಜೆನ್ಸಿಯಂತಿರುವ ಸಿಬಿಐ ಏಕೆ ಬೇಕು ಎಂದು ಪ್ರಶ್ನಿಸಿದರು.
ಹೊಸದಿಲ್ಲಿಯಲ್ಲಿ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಬಳ್ಳಾರಿ ಸಚಿವರನ್ನು ಕೈಬಿಡುವ ಕುರಿತಂತೆ ಮುಖ್ಯಮಂತ್ರಿಗಳು ಚಿಂತನೆ ನಡೆಸಿಲ್ಲ. ಆ ಬಗೆಗೆ ಕೇವಲ ವದಂತಿ ಹರಡಿದ್ದು, ತಲೆಕೆಡಿಸಿಕೊಳ್ಳಬೇಕಾದ್ದಿಲ್ಲ ಎಂದು ತಿಳಿಸಿದರು.