ತನ್ನ ಸ್ನೇಹಿತೆ ಪ್ರಿಯಾಂಕಾಳಿಗೆ ವಂಚಿಸಿ ಬೇರೊಬ್ಬಳನ್ನು ಮದುವೆಯಾದ ಪ್ರಕರಣದ ಆರೋಪಿಯಾಗಿದ್ದ ಆನಂದ್ ಕಳೆದ ಎಂಟು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದರು. ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಆನಂದ್ಗೆ ಜಾಮೀನು ಮಂಜೂರು ಮಾಡಿದೆ. ಇಬ್ಬರು ಸ್ಥಳೀಯ ವ್ಯಕ್ತಿಗಳ ಗ್ಯಾರಂಟಿ, 30ಸಾವಿರ ರೂ.ಷ್ಯೂರಿಟಿ ಪಡೆದು ಷರತ್ತುಬದ್ದ ಜಾಮೀನು ನೀಡಿದೆ.
ಅಲ್ಲದೆ, ಬೆಂಗಳೂರಿನಿಂದ ಹೊರಹೋಗದಂತೆ ಆನಂದ್ಗೆ ಸೂಚಿಸಿರುವ ಹೈಕೋರ್ಟ್, ನ್ಯಾಯಾಲಯಕ್ಕೆ ಪ್ರತಿ ವಿಚಾರಣೆಗೂ ತಪ್ಪದೆ ಹಾಜರಾಗುವಂತೆ ತಿಳಿಸಿದೆ. ಪ್ರತಿ 15ದಿನಗಳಿಗೊಮ್ಮೆ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು. ಸಾಕ್ಷ್ಯಗಳನ್ನು ನಾಶಪಡಿಸುವ ಪ್ರಯತ್ನ ಮಾಡಬಾರುದು ಎಂದು ಎಚ್ಚರಿಸಿದೆ.
ಕಳೆದ 2009ರ ನವೆಂಬರ್ 11ರಂದು ಪ್ರಿಯಾಂಕಾಗೆ ವಂಚಿಸಿದ ಪ್ರಕರಣದ ದೂರು ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪ್ರಿಯಾಂಕಾ ಮತ್ತು ಆನಂದ್ ನೆರೆ ಹೊರೆಯವರಾಗಿದ್ದು, ಸ್ನೇಹಿತರಾಗಿದ್ದರು. ಮದುವೆಯಾಗುವುದಾಗಿ ನಂಬಿಸಿ ಆನಂದ್ ಪ್ರಿಯಾಂಕಾಳನ್ನು ಗರ್ಭಿಣಿಯನ್ನಾಗಿಸಿ ವಂಚಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ನವೆಂಬರ್ 11ರಂದು ಆನಂದ್ ಬೇರೊಬ್ಬ ಯುವತಿ ಜತೆ ವಿವಾಹವಾಗುತ್ತಿದ್ದ ವೇಳೆಯಲ್ಲಿ ಪ್ರಿಯಾಂಕಾ ಮತ್ತು ಆಕೆಯ ಸಹೋದರಿಯರು ರಾಜಾಜಿನಗರದ ಕೆಇಬಿ ಕಲ್ಯಾಣ ಮಂಟಪಕ್ಕೆ ನುಗ್ಗಿ ಗಲಾಟೆ ಮಾಡಿ ಮದುವೆ ತಡೆಯುವ ಪ್ರಯತ್ನ ಮಾಡಿದ್ದರು. ಆದರೂ ಆನಂದ್ ಯುವತಿಗೆ ತಾಳಿ ಕಟ್ಟಿ ಪರಾರಿಯಾಗಿದ್ದ. ನಂತರ ಆತನನ್ನು ಪೊಲೀಸರು ಬಂಧಿಸಿದ್ದರು.