ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ದನಿಯೆತ್ತಿ: ಶಿವರಾಜ ತಂಗಡಗಿ (Shiv raj Thangadagi | BJP | Yeddyurappa | Congress | High court)
ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ದನಿಯೆತ್ತಿ: ಶಿವರಾಜ ತಂಗಡಗಿ
ರಾಮನಗರ, ಮಂಗಳವಾರ, 19 ಅಕ್ಟೋಬರ್ 2010( 14:50 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ದನಿಯೆತ್ತಿ, ಸರಕಾರ ಕಿತ್ತೊಗೆಯಲು ನಾವೆಲ್ಲ ಹೊರಬಂದಿದ್ದೇವೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಈಗಲ್ಟನ್ ರೆಸಾರ್ಟ್ನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಯಡಿಯೂರಪ್ಪ ಮತ್ತು ಸ್ಪೀಕರ್ ಬೋಪಯ್ಯ ಕಾನೂನು ದುರ್ಬಳಕೆ ಮಾಡಿಕೊಂಡು ಸರ್ವಾಧಿಕಾರಿಗಳಂತೆ ವರ್ತಿಸಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಶಾಸಕರನ್ನು ಅನರ್ಹಗೊಳಿಸುವ ಮೂಲಕ ಅರಾಜಕತೆ ಸೃಷ್ಟಿಸಿದ್ದಾರೆ. ಆದ್ದರಿಂದ ದೇವಾಲಯವೆಂದು ನಂಬಿರುವ ನ್ಯಾಯಾಲಯದಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ ಎಂಬ ವಿಶ್ವಾಸ ನಮಗಿದೆ ಎಂದರು.
ವಿಶ್ವನಾಥ್ ಎಂಬ ಬಾಲಕನನ್ನ ದತ್ತು ತೆಗೆದುಕೊಂಡು ಸುತ್ತೂರು ಮಠದಲ್ಲಿ ಆಶ್ರಯ ಕೊಡಿಸುತ್ತೇನೆ ಎಂದು ಮುಖ್ಯಮಂತ್ರಿಗಳು ನಾಟಕವಾಡುತ್ತಿದ್ದಾರೆ. ಸುತ್ತೂರು ಮಠದ ಶ್ರೀಗಳು ಸಾವಿರಾರು ಮಕ್ಕಳಿಗೆ ಆಶ್ರಯ ನೀಡಿ, ಅಕ್ಷರದ ಅರಿವು ಮೂಡಿಸುತ್ತಿದ್ದಾರೆ. ಆಶ್ರಮದಲ್ಲಿ ವಿಶ್ವನಾಥನಿಗೆ ಆಶ್ರಯ ನೀಡಲು ಸಿಎಂ ಶಿಫಾರಸು ಅಗತ್ಯವಿಲ್ಲ. ಬಾಲಕನ ಬಗ್ಗೆ ಕಾಳಜಿ ಇದ್ದರೆ, ತಮ್ಮ ಮನೆಯಲ್ಲೇ ಆಶ್ರಯ ನೀಡಬಹುದಿತ್ತು. ಆದರೆ ಹಾಗೆ ಮಾಡದ ಯಡಿಯೂರಪ್ಪ ತೋರಿಕೆಗೆ ನಾಟಕವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.