ಶಬರಿಮಲೆ ಅಯ್ಯಪ್ಪ ದೇಗುಲ ಗರ್ಭಗುಡಿ ಪ್ರವೇಶ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನ ಭೀತಿ ಎದುರಿಸುತ್ತಿದ್ದ ಕನ್ನಡ ಚಿತ್ರನಟಿ ಜಯಮಾಲಾ ತಾತ್ಕಾಲಿಕ ನಿರಾಳತೆ ಅನುಭವಿಸಿದ್ದಾರೆ.
ಪ್ರಕರಣದ ಮೂರನೇ ಆರೋಪಿ ಜಯಮಾಲಾರನ್ನು ಬಂಧಿಸುವುದಿಲ್ಲ ಎಂದು ಕೇರಳ ಪೊಲೀಸರು ಲಿಖಿತವಾಗಿ ತಿಳಿಸಿದ ನಂತರ ಅವರಿಗೆ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ನಾಲ್ಕು ವರ್ಷಗಳ ಹಿಂದೆ ಬೆಳಕಿಗೆ ಬಂದಿದ್ದ ದೇಗುಲ ಅಕ್ರಮ ಪ್ರವೇಶ ಪ್ರಕರಣದಲ್ಲಿ ಜಯಮಾಲಾರನ್ನು ಮೂರನೇ ಆರೋಪಿಯನ್ನಾಗಿ ಮಾಡಿ ದೋಷಾರೋಪ ಪಟ್ಟಿಯನ್ನು ಕೇರಳ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಚಿತ್ರನಟಿ ಬಂಧನ ಭೀತಿಯಲ್ಲಿದ್ದರು.
ನಟಿಯನ್ನು ಬಂಧಿಸುವಂತೆ ಕರ್ನಾಟಕ ಮತ್ತು ಕೇರಳ ಪೊಲೀಸರಿಗೆ ಸೂಚನೆ ನೀಡಲಾಗಿತ್ತು. ಹಾಗಾಗಿ ಅವರು ನಿರೀಕ್ಷಣಾ ಜಾಮೀನು ಪಡೆಯುವ ಯತ್ನ ನಡೆಸುತ್ತಿದ್ದರು.
ಕರ್ನಾಟಕ ಮತ್ತು ಕೇರಳ ಪೊಲೀಸರು ತನ್ನನ್ನು ಬಂಧಿಸದಂತೆ ನಿರೀಕ್ಷಣಾ ಜಾಮೀನು ಬೇಕೆಂದು ಜಯಮಾಲಾ ಶುಕ್ರವಾರ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣ ಕೈಗೆತ್ತಿಕೊಂಡಿದ್ದ ಹೈಕೋರ್ಟ್, ಕೇರಳ ಪೊಲೀಸರಿಗೆ ನೊಟೀಸ್ ಜಾರಿ ಮಾಡಿತ್ತು.
ನಟಿ ಜಯಮಾಲಾರನ್ನು ತಾವು ಬಂಧಿಸುವುದಿಲ್ಲ ಎಂದು ಕೊಟ್ಟಾಯಂ ಪೊಲೀಸರು ಇಂದು ಹೈಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿದರು. ನಂತರ ನಟಿ ಜಯಮಾಲಾರನ್ನು ಕರ್ನಾಟಕ ಅಥವಾ ಕೇರಳ ಪೊಲೀಸರು ಬಂಧಿಸದಂತೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತು. ಇದರೊಂದಿಗೆ ಜಯಮಾಲಾ ತಾತ್ಕಾಲಿಕವಾಗಿ ನಿಟ್ಟುಸಿರು ಬಿಟ್ಟಿದ್ದಾರೆ.
ಅಕ್ರಮ ಪ್ರವೇಶ ಪ್ರಕರಣವಿದು... 2006ರ ಜೂನ್ ತಿಂಗಳಲ್ಲಿ ಶಬರಿಮಲೆಯಲ್ಲಿ ಜ್ಯೋತಿಷಿ ಉಣ್ಣಿಕೃಷ್ಣನ್ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ಕೇಳಲಾಗಿತ್ತು. ಅಯ್ಯಪ್ಪ ವಿಗ್ರಹವನ್ನು ಮಹಿಳೆಯೊಬ್ಬಳು ಸ್ಪರ್ಶಿಸಿದ್ದಾರೆ, ಹಾಗಾಗಿ ದೇಗುಲ ಅಪವಿತ್ರಗೊಂಡಿದೆ ಎಂದು ಈ ಸಂದರ್ಭದಲ್ಲಿ ತಿಳಿದು ಬಂದಿತ್ತು.
ಕೆಲ ಸಮಯದ ನಂತರದ ಶಬರಿಮಲೆಗೆ ಪತ್ರ ಬರೆದಿದ್ದ ಜಯಮಾಲಾ, ಅಯ್ಯಪ್ಪ ವಿಗ್ರಹವನ್ನು ಸ್ಪರ್ಶಿಸಿದ್ದು ತಾನೇ ಎಂದು ತಪ್ಪೊಪ್ಪಿಗೆ ನೀಡಿದ್ದರು. ಅಲ್ಲದೆ ಕ್ಷಮೆ ಯಾಚಿಸಿದ್ದರು. ಬಳಿಕ ಪ್ರಕರಣ ಭಾರೀ ಸುದ್ದಿ ಮಾಡಿತ್ತು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಸಗಲಾಗಿದೆ ಎಂದು ಕೊಚ್ಚಿ ಪೊಲೀಸರು ಜಯಮಾಲಾ ಸೇರಿದಂತೆ ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಅದರಲ್ಲಿ ಜಯಮಾಲಾ ಹೆಸರನ್ನು ಸೇರಿಸಲಾಗಿದೆ. ಹಾಗಾಗಿ ಅವರು ಬಂಧನ ಭೀತಿ ಎದುರಿಸುತ್ತಿದ್ದರು.