ಇನ್ಮುಂದೆ ತಪ್ಪು ಮಾಡಲ್ಲ; 'ನಂಜುಂಡೇಶ್ವರನ ಮೇಲೆ ಸಿಎಂ ಆಣೆ'
ಬೆಂಗಳೂರು, ಬುಧವಾರ, 17 ನವೆಂಬರ್ 2010( 11:38 IST )
NRB
'ಇನ್ಮುಂದೆ ಯಾವುದೇ ಒತ್ತಡಕ್ಕೆ ಮಣಿದು ಕಾನೂನು ಚೌಕಟ್ಟು ಮೀರಿ ಕೆಲಸ ಮಾಡಲ್ಲ ಎಂದು ನಂಜುಂಡೇಶ್ವರನ ಮೇಲೆ ಆಣೆ ಮಾಡಿದ್ದೇನೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಕಾನೂನು ಬಾಹಿರ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಕಾನೂನು ಉಲ್ಲಂಘಿಸಿ ನಾನು ಯಾರಿಗೂ ಸೈಟ್ ನೀಡಿಲ್ಲ. ಕೈಗಾರಿಕೆ ಮಾಡುತ್ತೇನೆ ಎಂದವರಿಗೆ ಕಾನೂನುಬದ್ಧವಾಗಿ ಜಮೀನು ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ವಿಪಕ್ಷಗಳು ಆರೋಪ ಮಾಡುವಂತೆ ನಾನು ಯಾರಿಗೂ ಕಾನೂನು ಮೀರಿ ಜಮೀನು ನೀಡಿಲ್ಲ. ಅದಕ್ಕಾಗಿಯೇ ಇತ್ತೀಚೆಗೆ ನಂಜುಂಡೇಶ್ವರ ದೇವಾಲಯಕ್ಕೆ ತೆರಳಿದಾಗ ಸುಮಾರು ಒಂದು ಗಂಟೆ ಕಾಲ ಪ್ರಾರ್ಥನೆ ಮಾಡಿದ ಸಂದರ್ಭದಲ್ಲಿ ಇನ್ಮುಂದೆ ಕಾನೂನು ಚೌಕಟ್ಟಿನಲ್ಲಿಯೇ ಕಾರ್ಯನಿರ್ವಹಿಸುವುದಾಗಿ ಪ್ರಮಾಣ ಮಾಡಿದ್ದೇನೆ ಎಂದರು.
ಬಿಜೆಪಿಯವರಿಗೆ ಮಾತ್ರ ನಾನು ಸೈಟ್ ಕೊಟ್ಟಿಲ್ಲ. ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಪುತ್ರಿ ಪ್ರಿಯದರ್ಶಿನಿ ಅವರಿಗೂ ಎಚ್ಎಸ್ಆರ್ ಲೇಔಟ್ನಲ್ಲಿ ನಿವೇಶನ ನೀಡಿದ್ದೇನೆ. ಕಾಂಗ್ರೆಸ್, ಜೆಡಿಎಸ್ ಮುಖಂಡರಿಗೆ ನಾನೇ ಕರೆದು ಸೈಟ್ ಕೊಟ್ಟಿದ್ದೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಅದೇ ರೀತಿ ಕಾಂಗ್ರೆಸ್, ಜೆಡಿಎಸ್ನವರು ತಮಗೆ ಸಿಕ್ಕ ನಿವೇಶನ ಮಾರಿ, ಮತ್ತೆ ತಮಗೆ ಸೈಟ್ ಬೇಕೆಂದು ಕೋರಿ ಅರ್ಜಿ ಸಲ್ಲಿಸಿದವರು ಇದ್ದಾರೆ. ಆ ಬಗ್ಗೆ ಸಮಯ ಬಂದಾಗ ಮಾಹಿತಿ ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.
ನನ್ನ ಮಗಳಿಗೆ, ಯಡಿಯೂರಪ್ಪ ಪುತ್ರನಿಗೆ ನಾನೇ ಸೈಟ್ ಕೊಟ್ಟಿದ್ದು-ಧರಂಸಿಂಗ್: ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ನನ್ನ ಅವಧಿಯಲ್ಲೇ ನನ್ನ ಮಗಳಿಗೆ ಬಿಡಿಎ ಸೈಟ್ ನೀಡಿದ್ದೇನೆ. ಆದರೆ ನಾನು ಯಡಿಯೂರಪ್ಪ ಅವರ ಮುಂದೆ ಬಿಡಿಎ ಸೈಟ್ ಕೊಡಿ ಎಂದು ಯಾವುದೇ ಅರ್ಜಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಅಧಿಕಾರಾವಧಿಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ, ಸಿಎಂ ಪುತ್ರ, ಶಾಂತವೀರ ಗೌಡರಿಗೆ ಬಿಡಿಎ ಸೈಟ್ ಹಂಚಿದ್ದೇನೆ ವಿನಃ, ನಾನು ಯಾವುದೇ ಸೈಟ್ ಯಡಿಯೂರಪ್ಪ ಅವರಿಂದ ಪಡೆದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.