ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳನ್ನು ಭೂ ಹಗರಣದಲ್ಲಿ ಸಿಲುಕಿಸಿ ಅವರನ್ನು ರಾಜಕೀಯವಾಗಿ ಮುಗಿಸುವ ತಂತ್ರಗಾರಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೊಡಗಿದ್ದಾರೆ ಎಂದು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪನವರ ವಿರುದ್ಧ ಸಿಎಂ ಕುಟುಂಬವೇ ಭೂ ಹಗರಣದ ಮಾಹಿತಿ ಬಿಡುಗಡೆ ಮಾಡಿದೆ ಎಂದು ಪತ್ರಿಕೆಗಳು ಈಗಾಗಲೇ ವರದಿ ಮಾಡಿವೆ. ಸಂಸದ ಅನಂತ ಕುಮಾರ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ ಅವರ ವಿರುದ್ಧವೂ ಭೂಹಗರಣದ ಆರೋಪ ಹೊರಿಸಿ ದಾಖಲೆಗಳನ್ನು ಬಿಡುಗಡೆ ಮಾಡುವ ಕಾರ್ಯದಲ್ಲಿ ಮುಖ್ಯಮಂತ್ರಿ ಕುಟುಂಬ ತೊಡಗಿದೆ ಎಂದು ರೇವಣ್ಣ ಗುಲ್ಬರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆಲವು ರಾಜಕೀಯ ಪ್ರಮುಖರ ವಿರುದ್ಧ ಭೂ ಹಗರಣದ ಕುರಿತಂತೆ ಮಾಹಿತಿ ಕಲೆ ಹಾಕಲು ಮುಖ್ಯಮಂತ್ರಿ ಕಚೇರಿಯಿಂದ ತಾಲೂಕು ಅಧಿಕಾರಿಗಳಿಗೆ ದೂರವಾಣಿ ಮಾಡಿ ಮಾಹಿತಿ ಪಡೆಯಲಾಗುತ್ತಿದೆ. ಮುಖ್ಯಮಂತ್ರಿಗಳು ಇದೆಲ್ಲವನ್ನು ಏಕೆ ಮಾಡಬೇಕು ಎಂದು ಪ್ರಶ್ನಿಸಿರುವ ರೇವಣ್ಣ, ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವವರ ಹೆಸರು ಗೊತ್ತಿದ್ದರೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಲಿ ಎಂದು ಸವಾಲು ಹಾಕಿದರು.
ಭೂ ಹಗರಣದ ಕುರಿತಂತೆ ನ್ಯಾಯಾಂಗ ತನಿಖೆ ನಡೆಸುತ್ತೇನೆ, ಪ್ರತಿಪಕ್ಷಗಳ ನಾಯಕರ ಮಾನ ಹರಾಜು ಹಾಕುತ್ತೇನೆ ಎಂದೆಲ್ಲ ಮಾತನಾಡಿದ ಯಡಿಯೂರಪ್ಪನವರು ಈಗ ತಮ್ಮ ರಾಗ ಬದಲಿಸಿ ಪ್ರತಿಪಕ್ಷಗಳ ನಾಯಕರ ಜತೆ ಚರ್ಚಿಸುತ್ತೇನೆ ಎಂದಿದ್ದಾರೆ. ನಮ್ಮನ್ನು ಕಳ್ಳರು ಎಂದು ಕರೆದಿರುವ ಸಿಎಂ ಈಗ ನಮ್ಮ ಜತೆ ಮಾತನಾಡುವ ಅಗತ್ಯವೇನಿದೆ ಎಂದು ಖಾರವಾಗಿ ಪ್ರಶ್ನಿಸಿದರು.