ವಾಮಾಚಾರಕ್ಕೆ ಯಾವುದೇ ವೈಜ್ಞಾನಿಕ ಹಿನ್ನೆಲೆ ಇಲ್ಲ: ನಟರಾಜ್
ತುಮಕೂರು, ಭಾನುವಾರ, 2 ಜನವರಿ 2011( 16:39 IST )
ವಾಮಾಚಾರಕ್ಕೆ ಯಾವುದೇ ವೈಜ್ಞಾನಿಕ ಹಿನ್ನೆಲೆ ಇಲ್ಲ. ವಾಮಾಚಾರದಿಂದ ಹೆದರಿಸುವ ಕೆಲಸವನ್ನು ಯಾರಾದರೂ ಮಾಡಿದರೆ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಪವಾಡ ಭಂಜಯ ಹಾಗೂ ಪವಾಡ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಹುಲಿಕಲ್ ನಟರಾಜ್ ಹೇಳಿದರು.
ಸಿದ್ಧಗಂಗಾ ಮಠದಲ್ಲಿ ನಡೆದ ಮುಖ್ಯ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ದಿನೇ ದಿನೆ ವರದಿಯಾಗುತ್ತಿರುವ ಘಟನೆಗಳು ವೈಚಾರಿಕ ಪ್ರಜ್ಞೆಯುಳ್ಳವರು ಬೆಚ್ಚಿ ಬೀಳುವಂತೆ ಮಾಡಿವೆ.
ಶಕ್ತಿ ಕೇಂದ್ರ ವಿಧಾನಸೌಧದಿಂದ ಆರಂಭಗೊಂಡು ರಾಜ್ಯದಲ್ಲಿ ಹಲವೆಡೆ ಜನ ಸಾಮಾನ್ಯರ ಮಧ್ಯೆ ಸದ್ದು ಮಾಡಿ ಇದೀಗ ಚುನಾವಣೆವರೆಗೂ ಬಂದು ನಿಂತಿದೆ. ವೈಚಾರಿಕ ಪ್ರಜ್ಞೆ ಮೆರೆಯಬೇಕಾದ ಈ ಕಾಲದಲ್ಲಿ ಮೂಢ ಆಚರಣೆಗಳು ಮತ್ತಷ್ಟು ಶಕ್ತಿ ಪಡೆಯುತ್ತಿರುವುದು ವೈಚಾರಿಕ ಪ್ರಜ್ಞೆಗೆ ಉಂಟಾಗುತ್ತಿರುವ ಹಿನ್ನಡೆ ಎಂದು ಕಳವಳ ವ್ಯಕ್ತಪಡಿಸಿದರು.
ಮೂಢ ಆಚರಣೆಗಳ ವಿರುದ್ಧ ನಾಡಿನ ಎಲ್ಲ ವಿಚಾರವಂತರೂ ಕೈ ಜೋಡಿಸಬೇಕಾದ ಕಾಲ ಬಂದಿದೆ. ವಾಮಾಚಾರದಿಂದ ವಾಸ್ತವವಾಗಿ ಯಾವುದೇ ತೊಂದರೆ ಇಲ್ಲದಿದ್ದರೂ ಅದರ ಬಗ್ಗೆ ಭಯವಿರುವ ಮುಗ್ಧ ಜನರನ್ನು ವಂಚಿಸುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಅದಕ್ಕೆ ದೃಶ್ಯ ಮಾಧ್ಯಮಗಳು ನೀಡುತ್ತಿರುವ ಪ್ರಚಾರ ಜನರಲ್ಲಿ ಭೀತಿ ಹೆಚ್ಚಿಸಿದೆ. ಸರಕಾರ ವಾಮಾಚಾರದಂಥ ಕುಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮೂಢ ನಂಬಿಕೆಗಳನ್ನು ಬುಡಮೇಲು ಮಾಡಬೇಕು ಎಂದರು.