ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಬಲ 106ಕ್ಕೆ ಕುಗ್ಗಿಸಿದ್ದೆ, ಇನ್ನು 80ಕ್ಕೆ ಇಳಿಸ್ತೇನೆ!: ಎಚ್ಡಿಕೆ (BJP | Kumaraswamy | JDS | Operation kamala | Yeddyurappa)
ಬಿಜೆಪಿ ಬಲ 106ಕ್ಕೆ ಕುಗ್ಗಿಸಿದ್ದೆ, ಇನ್ನು 80ಕ್ಕೆ ಇಳಿಸ್ತೇನೆ!: ಎಚ್ಡಿಕೆ
ಬೆಂಗಳೂರು, ಸೋಮವಾರ, 7 ಮಾರ್ಚ್ 2011( 12:36 IST )
ಬೆಂಗಳೂರು: 'ಆಡಳಿತಾರೂಢ ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಹಾಗಾಗಿ ಬಿಜೆಪಿ ಪಕ್ಷದ ಬಲ ಕುಗ್ಗಿಸೋದು ನನಗೂ ಗೊತ್ತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಈಗಾಗಲೇ ಬಿಜೆಪಿ ಬಲವನ್ನು 106ಕ್ಕೆ ಇಳಿಸಿದ್ದೇನೆ. ಬಿಜೆಪಿ ಇನ್ನೂ ಆಪರೇಶನ್ ಕಮಲ ಮುಂದುವರಿಸಿದ್ರೆ ಅದರ ಬಲವನ್ನು 75-80ಕ್ಕೆ ಇಳಿಸುತ್ತೇನೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.
ಜೆಡಿಎಸ್ ತಂಟೆಗೆ ಬಂದ್ರೆ ಹುಷಾರ್ ಎಂದು ಎಚ್ಚರಿಕೆ ನೀಡಿರುವ ಅವರು, ಹಣ ಮತ್ತು ಅಧಿಕಾರ ಬಲದಿಂದ ಆಪರೇಷನ್ ಕಮಲ ನಡೆಸುತ್ತಿರುವ ಬಿಜೆಪಿ ರಾಜ್ಯದಲ್ಲಿ ಇದೇ ರೀತಿ ಪ್ರಜಾಪ್ರಭುತ್ವ ವಿರೋಧಿ ನೀತಿಗೆ ತಕ್ಕ ಉತ್ತರ ಕೊಡಲು ಜೆಡಿಎಸ್ ಸಿದ್ದ ಎಂದು ಕಿಡಿಕಾರಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಶಾಸಕರನ್ನು ಅವರು ಸೆಳೆಯಲಿ, ಬಿಜೆಪಿಯ ಕೆಲವು ಶಾಸಕರು ನನ್ನ ಸಂಪರ್ಕದಲ್ಲಿಯೂ ಇದ್ದಾರೆ. ನನಗೂ ಗೊತ್ತು ಏನು ಮಾಡಬೇಕೆಂದು ಎಂಬುದಾಗಿ ಟಾಂಗ್ ನೀಡಿದ್ದಾರೆ. ಅಷ್ಟೇ ಅಲ್ಲ ಬಿಜೆಪಿ ಸರಕಾರದ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದ್ದು, ಇನ್ನೊಂದು ಕರ್ಮಕಾಂಡವನ್ನು ಸೋಮವಾರ ಬಹಿರಂಗಪಡಿಸಲಿದ್ದೇನೆ ಎಂದರು.
ಅಲ್ಲದೇ ತಮ್ಮ ಪುತ್ರ ನಿಖಿಲ್ ಗೌಡ ಕೊಪ್ಪಳದಿಂದ ಸ್ಪರ್ಧಿಸಲ್ಲ. ಇವೆಲ್ಲಾ ಊಹಾಪೋಹದ ಸುದ್ದಿಗಳು ಎಂದು ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು. ಇತ್ತೀಚೆಗಷ್ಟೇ ಕೊಪ್ಪಳ ಕ್ಷೇತ್ರದ ಜೆಡಿಎಸ್ ಶಾಸಕ ಸಂಗಣ್ಣ ಕರಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಲು ಸಿದ್ದತೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಜೆಡಿಎಸ್ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಅವರನ್ನು ಕೊಪ್ಪಳ ಕ್ಷೇತ್ರದಿಂದ ಕಣಕ್ಕಿಳಿಸಲು ಸಿದ್ದತೆ ನಡೆಸುತ್ತಿದೆ ಎಂಬ ಗಾಳಿಸುದ್ದಿ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.